ಗದಗ: ದಲಿತ ಸಮುದಾಯದವರಿಗೆ ಕ್ಷೌರ ಸೇವೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವೇ ನೇರವಾಗಿ ಹಸ್ತಕ್ಷೇಪ ಮಾಡಿ ಗ್ರಾಮದಲ್ಲೇ ಹೊಸ ಕ್ಷೌರದ ಅಂಗಡಿಯನ್ನು ಆರಂಭಿಸಿರುವ ಅಪರೂಪದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಕೆಲ ಸ್ಥಳೀಯ ಕ್ಷೌರಿಕರು ದಲಿತರಿಗೆ ಸೇವೆ ನೀಡಲು ಹಿಂದೇಟು ಹಾಕಿದ್ದಾಗಿ ಆರೋಪಗಳು ಕೇಳಿಬಂದಿದ್ದವು. ಈ ವಿಚಾರ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ ತಹಶೀಲ್ದಾರ್ ಸಭೆ ನಡೆಸಿ, ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಿದ್ದರೂ ಸಮಸ್ಯೆಗೆ ತಕ್ಷಣದ ಪರಿಹಾರ ಸಿಕ್ಕಿರಲಿಲ್ಲ. ಕೆಲ ಕ್ಷೌರಿಕರು ತಮ್ಮ ಅಂಗಡಿಗಳನ್ನೇ ಮುಚ್ಚಿ ವಿರೋಧ ವ್ಯಕ್ತಪಡಿಸಿದ ಕಾರಣ ಪರಿಸ್ಥಿತಿ ಗಂಭೀರವಾಗಿತ್ತು.
ಸಾಮಾಜಿಕ ಅಸಮಾನತೆಯನ್ನು ನಿರ್ಮೂಲಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ ಮಹತ್ವದ ತೀರ್ಮಾನ ಕೈಗೊಂಡಿತು. ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಸಹಯೋಗದಲ್ಲಿ ಸರ್ಕಾರದ ವತಿಯಿಂದಲೇ ಗ್ರಾಮದಲ್ಲಿ ಹೊಸ ಕ್ಷೌರದ ಅಂಗಡಿ ಆರಂಭಿಸಲಾಯಿತು. ಶಿವಶರಣ ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ದೇವಪ್ಪ ಹಡಪದ ಅವರು ಸರ್ಕಾರದೊಂದಿಗೆ ಕೈಜೋಡಿಸಿ, ತಮ್ಮ ಸಹೋದರರನ್ನು ಗ್ರಾಮಕ್ಕೆ ಕಳುಹಿಸಲು ಸಮ್ಮತಿಸಿದ್ದಾರೆ.
ಗುರುವಾರದಿಂದ ಅಧಿಕೃತವಾಗಿ ಸರ್ಕಾರದ ಬೆಂಬಲದೊಂದಿಗೆ ಈ ಹೊಸ ಕ್ಷೌರದ ಅಂಗಡಿ ಕಾರ್ಯಾರಂಭ ಮಾಡಿದ್ದು, ದಲಿತ ಸಮುದಾಯದವರು ಯಾವುದೇ ಭೇದಭಾವವಿಲ್ಲದೆ ಸೇವೆ ಪಡೆಯುವಂತಾಗಿದೆ. ಜಿಲ್ಲಾಡಳಿತದ ಈ ಕ್ರಮ ಸಾಮಾಜಿಕ ಸಮಾನತೆ ಮತ್ತು ನ್ಯಾಯದತ್ತ ತೆಗೆದುಕೊಂಡ ಮಹತ್ವದ ಹೆಜ್ಜೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.