ಕಾಲುವೆ ಆಧುನೀಕರಣ ಕಾಮಗಾರಿಗೆ ಸಚಿವ ಕೆ. ವೆಂಕಟೇಶ್ ಚಾಲನೆ
ಪಿರಿಯಾಪಟ್ಟಣ: ಈ ಭಾಗದಲ್ಲಿ ನೀರಾವರಿ ಸೌಲಭ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿದ್ದು, ರೈತರ ಕೃಷಿ ಉತ್ಪಾದನೆ ಹೆಚ್ಚಿಸುವುದು ಮತ್ತು ನೀರಿನ ಸಮರ್ಪಕ ಬಳಕೆಗೆ ಉತ್ತೇಜನ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.
ಹಾರಂಗಿ ಜಲಾಶಯ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಲುವೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸುಮಾರು 198 ಕೋಟಿ ರೂ ಅನುದಾನ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಪ್ರದೇಶದ ರೈತರಿಗೆ ಮಹತ್ವದ ನೀರಾವರಿ ಸೌಲಭ್ಯ ಲಭ್ಯವಾಗಲಿದೆ. ಯೋಜನೆಯಡಿ 324 ಕ್ಯೂಸೆಕ್ಸ್ ನೀರನ್ನು ಎತ್ತಿ ಮುಖ್ಯ ನಾಲೆಯ ಮುಖಾಂತರ ಹರಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಇದರಿಂದ ಸುಮಾರು 30 ಸಾವಿರ ಎಕರೆ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.
ಇದರ ಮೂಲಕ ಅರೆ ನೀರಾವರಿ ಬೆಳೆಗಳಿಗೆ ನೀರು ಒದಗುವಂತಾಗುವುದರ ಜೊತೆಗೆ ಜಾನುವಾರುಗಳಿಗೆ ಕುಡಿಯುವ ನೀರು, ರೈತರ ಕೃಷಿ ಚಟುವಟಿಕೆಗಳಿಗೆ ನೆರವು ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಸಹ ಯೋಜನೆ ಸಹಕಾರಿಯಾಗಲಿದೆ. ಯೋಜನೆ ಪೂರ್ಣಗೊಂಡ ಬಳಿಕ ರೈತರಿಗೆ ದೀರ್ಘಕಾಲಿಕ ಪ್ರಯೋಜನ ದೊರೆಯಲಿದ್ದು, ಕೃಷಿ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರಹಮದ್ ಜಾನ್ ಬಾಬು, ಡಿ.ಟಿ. ಸ್ವಾಮಿ, ಹೊಲದಪ್ಪ, ಮೈಮುಲ್ ಪ್ರಕಾಶ್, ಬಸವರಾಜು, ಪರಮೇಶ್, ಲೋಕೇಶ್, ಅನಿಲ್ ಕುಮಾರ್, ಪುಟ್ಟರಾಜು, ಮಹದೇವ್, ಅಶೋಕ್, ವಿಷಕಂಠಯ್ಯ, ರಾಮಚಂದ್ರ, ಹಾರಂಗಿ ಇಲಾಖೆಯ ಅಧೀಕ್ಷಕ ಸತೀಶ್, ಎಇಇ ಗೋಕುಲ್, ಎಇ ಮೋಹನ್ ಕುಮಾರ್, ಶಿವಕುಮಾರ್, ಗುತ್ತಿಗೆದಾರ ರಘುಪತಿ, ಅಂಬಲಾರೆ ಗಣೇಶ್, ಮಹೇಶ್, ಚಿಕ್ಕನೇರಳೆ ಮೋಹನ್, ಜ್ಯೋತಿ ಕುಮಾರ್, ರವಿಬೋವಿ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಪ್ರಸನ್ನ ಕುಮಾರ್ ಬಿ.ಎಸ್.