ಹಾವೇರಿ: ಆಸ್ತಿ, ಮನೆ ಅಥವಾ ಬೆಲೆಬಾಳುವ ವಸ್ತುಗಳ ವಿಚಾರವಾಗಿ ಜಗಳವಾಗುವುದು ಸಾಮಾನ್ಯ. ಆದರೆ ದೇವಸ್ಥಾನದ ಮೇಲಿನ ಹಕ್ಕಿಗಾಗಿ ಎರಡು ಗ್ರಾಮಗಳ ನಡುವೆ ಭೀಕರ ಸಂಘರ್ಷ ನಡೆದ ಘಟನೆ ಹಾವೇರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಿರೇ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಸ್ಥರ ನಡುವೆ ದೇವಸ್ಥಾನದ ಹಕ್ಕು ಹಾಗೂ ಆಡಳಿತದ ವಿಚಾರವಾಗಿ ಬಹುಕಾಲದಿಂದಲೂ ಇರುವ ಉದ್ವಿಗ್ನತೆ ಗುರುವಾರ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.
ಗುಡ್ಡದ ಮೇಲಿರುವ ಹಳೆಯ ದೇವಸ್ಥಾನದ ಬಳಿಯಲ್ಲಿ ಹೊಸ ದೇವಸ್ಥಾನ ನಿರ್ಮಿಸಲು ಹಿರೇ ಯಡಚಿ ಗ್ರಾಮಸ್ಥರು ಮುಂದಾಗಿದ್ದರು. ಇದೇ ವೇಳೆ ಮಾರ್ಚ್ 9ರಿಂದ ದುರಗಮ್ಮನ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಿ, ಮಂಟಪ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಇದನ್ನು ವಿರೋಧಿಸಿದ ಕ್ಯಾತನಕೇರಿ ಗ್ರಾಮಸ್ಥರು ‘ನಮ್ಮ ಅನುಮತಿ ಇಲ್ಲದೆ ದೇವಸ್ಥಾನ ನಿರ್ಮಾಣ ಹೇಗೆ ಮಾಡುತ್ತೀರಿ?’ ಎಂದು ಪ್ರಶ್ನಿಸಿ ತಕರಾರು ತೆಗೆದಿದ್ದಾರೆ.
ಮಾತಿನ ಚಕಮಕಿ ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿ, ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವಾರು ವಾಹನಗಳು ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಗುಡ್ಡದ ಪ್ರದೇಶ ಹಾಗೂ ಎರಡೂ ಗ್ರಾಮಗಳಲ್ಲಿ ಪೊಲೀಸ್ ಕಾವಲು ಬಿಗಿಗೊಳಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದ್ದು, ದೇವಸ್ಥಾನ ವಿವಾದಕ್ಕೆ ಸಂಬಂಧಿಸಿ ಶಾಂತಿ ಸಭೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.