ಕಾರವಾರ: ದೇಶದಲ್ಲಿ ಅಣು ವಿದ್ಯುತ್ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂಪೂರ್ಣ ಸ್ವಾವಲಂಬನೆಯೊಂದಿಗೆ ಆತ್ಮ ನಿರ್ಭರತೆ ಸಾಧಿಸಲಾಗಿದೆ ಎಂದು ಅಣು ಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಕೇಂದ್ರ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಡಾ. ಅಜಿತ್ ಕುಮಾರ್ ಮೊಹಂತಿ ತಿಳಿಸಿದರು.
ಅವರು ಭಾನುವಾರ ಕೈಗಾದಲ್ಲಿ, ಕೈಗಾ 5 ಮತ್ತು 6ನೇ ಘಟಕದ ಪ್ರಥಮ ಕಾಂಕ್ರೀಟೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶವು 2047ಕ್ಕೆ 100 ಗಿಗಾ ವ್ಯಾಟ್ ಅಣುವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು, ಇದಕ್ಕಾಗಿ ಎನ್.ಪಿ.ಸಿ.ಎಲ್ ವತಿಯಿಂದ 54 ಗಿಗಾವ್ಯಾಟ್ ಉತ್ಪಾದನೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ. ಅಣು ವಿದುತ್ ಉತ್ಪಾದನೆಗೆ ನೀರಿನ ಒತ್ತಡದ ರಿಯಾಕ್ಟರ್ಗಳು ಮತ್ತು ಹೊಸದಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್ಗಳನ್ನು ಆರಂಭಿಸುವ ಉದ್ದೇಶವನ್ನು ಹೊಂದಲಾಗಿದೆ. ಈಗಾಗಲೇ ಇದರ ಆರಂಭಿಕ ಕಾರ್ಯಗಳು ಪ್ರಾಯೋಗಿಕವಾಗಿ ನಡೆಯುತ್ತಿದ್ದು, ಅಣು ವಿದ್ಯುತ್ ಉತ್ಪಾದನೆಯಲ್ಲಿ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಕೈಗಾದಲ್ಲಿ ಉದ್ದೇಶಿತ 5 ಮತ್ತು 6ರ ಮೊದಲ ಘಟಕವು ಸುಮಾರು 60 ತಿಂಗಳಲ್ಲಿ ವಿದ್ಯುತ್ ಉತ್ಪಾದನಾ ಹಂತವನ್ನು ಸಾಧಿಸುವ ನಿರೀಕ್ಷೆಯಿದ್ದು, ಮೊದಲ ಬಾರಿಗೆ ಈ ಯೋಜನೆಯ ನಿರ್ಮಾಣವನ್ನು ಕೆಲವೇ ಮೆಗಾ EPC ಪ್ಯಾಕೇಜ್ಗಳನ್ನು (ಉತ್ಪನನ, ಪರಮಾಣು ದ್ವೀಪ, ಟರ್ಬೈನ್ ದ್ವೀಪ ಮತ್ತು ಪರಮಾಣು ಉಪಕರಣಗಳಂತಹವು) ಒಳಗೊಂಡ ನವೀನ ಕಾರ್ಯತಂತ್ರವನ್ನು ಅಳವಡಿಸಿಕೊಂಡು ಕಾರ್ಯಗತಗೊಳಿಸಲಾಗುತ್ತಿದೆ. ಇದು ಯೋಜನೆಯನ್ನು ವೇಗವಾಗಿ ಕಾರ್ಯಗತಗೊಳಿಸಲು ಮತ್ತು ವಿವಿಧ ಪ್ಯಾಕೇಜ್ಗಳ ನಡುವೆ ಸಮನ್ವಯ ಸಾಧಿಸಿ, ಅತೀ ಕಡಿಮೆ ಸಮಯದಲ್ಲಿ ಮತ್ತು ವೆಚ್ಚದಲ್ಲಿ ಯೋಜನೆಯ ಕಾರ್ಯಾನ್ವಯಕ್ಕೆ ಅನುವು ಮಾಡಿಕೊಡುತ್ತದೆ ಎಂದರು.
ಕೈಗಾದ 5 ಮತ್ತು 6ನೇ ಘಟಕಗಳು ಅತ್ಯಾಧುನಿಕ, ಭಾರತೀಯ ತಂತ್ರಜ್ಞಾನದ 700 700 MW PHWR ಆಗಿದ್ದು, ಇವು ಸುಧಾರಿತ ಸುರಕ್ಷತಾ ವೈಶಿಷ್ಠ್ಯಗಳನ್ನು ಒಳಗೊಂಡಿವೆ, ವಿಶ್ವದ ಅತ್ಯಂತಸುರಕ್ಷಿತವಾದ ಅಣುಸ್ಥಾವರಗಳ ಸಾಲಿಗೆ ಸೇರಿವೆ. ಯೋಜನೆಗೆ ಸಂಬಂಧಿಸಿದ ಸಾಮಗ್ರಿಗಳು ಮತ್ತು ಉಪಕರಣಗಳನ್ನು ದೇಶೀಯ ಉದ್ಯಮ ಪಾಲುದಾರರು ಪೂರೈಸಲಿದ್ದು, ಸರ್ಕಾರದ “ಆತ್ಮನಿರ್ಭರ ಭಾರತ” ಧ್ಯೇಯಕ್ಕೆ ಅನುಗುಣವಾಗಿ ಕೆಲಸಗಳನ್ನು ಭಾರತೀಯ ಗುತ್ತಿಗೆದಾರರೇ ನಿರ್ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎನ್ಪಿಸಿಎಲ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ರ ಪಾಠಕ್, ಕೈಗಾದ ಸ್ಥಳ ನಿರ್ದೇಶಕ ಬಿ. ವಿನೋದ್ ಕುಮಾರ್ ಹಾಗೂ ಕೈಗಾ 5ಮತ್ತು 6ರ ಘಟಕದ ನಿರ್ದೇಶಕ ಕುಲಕರ್ಣಿ ಸೇರಿದಂತೆ ಎನ್.ಪಿ.ಸಿ.ಎಲ್ ಕೈಗಾದ ಅಧಿಕಾರಿಗಳು ಇದ್ದರು.