ಹುಬ್ಬಳ್ಳಿ: ನಮ್ಮ ಸಮಾಜದಲ್ಲಿ “ಲವ್ ಜಿಹಾದ್” ಎನ್ನುವ ವಿಷಯ ಗಂಭೀರ ಸಮಸ್ಯೆಯಾಗಿ ರೂಪುಗೊಳ್ಳುತ್ತಿದೆ. ಈ ಕುರಿತು ಸರ್ಕಾರ ಕಠಿಣ ಕಾನೂನು ರೂಪಿಸಬೇಕು ಎಂಬ ಬೇಡಿಕೆಯನ್ನು ಹಲವು ವರ್ಷಗಳಿಂದ ಮುಂದಿರಿಸುತ್ತಿದ್ದರೂ, ಇದುವರೆಗೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ. ಅನೇಕ ಯುವತಿಯರು ಇಂತಹ ಸಂಬಂಧಗಳ ಬಲೆಗೆ ಸಿಲುಕಿ ತಮ್ಮ ಜೀವನದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಲ ಯುವತಿಯರು ಲವ್ ಜಿಹಾದ್ನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ತಮಗೆ ಪರಿಚಯವಾದ ಅನ್ಯಧರ್ಮೀಯರು ಆರಂಭದಲ್ಲಿ ಮದುವೆಯಾದರೂ ಮತಾಂತರವಾಗುವ ಅಗತ್ಯವಿಲ್ಲ, ಬುರ್ಖಾ ಧರಿಸುವುದೂ ಬೇಡ, ರಾಣಿಯಂತೆ ಬದುಕಿಸುತ್ತೇವೆ ಎಂಬ ಭರವಸೆ ನೀಡುತ್ತಿದ್ದರು. ಆದರೆ ನಂತರ ಆ ಮಾತುಗಳು ನಿಜವಲ್ಲವೆಂಬುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ. ಹಲವು ಸಮಸ್ಯೆಗಳನ್ನು ಎದುರಿಸಿ ಆ ನರಕದಿಂದ ಹೊರಬಂದಿದ್ದೇವೆ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಇದೇ ವೇಳೆ, ಈ ಹಿಂದೆ ಕಾಲೇಜು ಕ್ಯಾಂಪಸ್ನಲ್ಲಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಕೂಡ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇಂತಹ ಘಟನೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಆರೋಪಿಸಿ, ತಮ್ಮ ಮಗಳ ಹತ್ಯೆ ಪ್ರಕರಣಕ್ಕೆ ನ್ಯಾಯ ದೊರಕಬೇಕು ಎಂಬ ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟರಲ್ಲದೆ, ಘಟನೆ ನಡೆದ ವೇಳೆ ಅನೇಕ ರಾಜಕೀಯ ನಾಯಕರು ಶೀಘ್ರ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಷ್ಟೊಂದು ಸಮಯ ಕಳೆದರೂ ನ್ಯಾಯ ಸಿಕ್ಕಿಲ್ಲ ಎಂಬ ನೋವನ್ನು ವ್ಯಕ್ತಪಡಿಸಿದರು.
ಈ ಘಟನೆಗಳ ಹಿನ್ನೆಲೆ, ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರವು ಸ್ಪಷ್ಟ ಮತ್ತು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.