ಅಹ್ಮದಾಬಾದ್: ದೇಶದ ಭೀಕರ ವಿಮಾನ ದುರಂತಗಳ ಸಾಲಿಗೆ ಸೇರಿದ್ದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ವಿಮಾನ ದುರಂತವು ತಾಂತ್ರಿಕ ದೋಷದಿಂದ ಸಂಭವಿಸಿದ್ದಲ್ಲ, ಬದಲಾಗಿ ಇದು ಒಬ್ಬರ ಉದ್ದೇಶಪೂರ್ವಕ ಕೃತ್ಯ ಎಂಬ ತೀರ್ಮಾನಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆ.
ಜೂನ್ 12ರಂದು ಮಧ್ಯಾಹ್ನ 1:39ರ ವೇಳೆಗೆ ಅಹಮದಾಬಾದ್ನಿಂದ ಲಂಡನ್ ಗ್ಯಾತ್ವಿಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ಟೇಕಾಫ್ ಆದ 35 ಸೆಕೆಂಡುಗಳಲ್ಲಿ ವಿಮಾನ ನಿಲ್ದಾಣದ ಸಮೀಪವೇ ಇರುವ ಮೆಡಿಕಲ್ ಆಸ್ಪತ್ರೆಯ ಹಾಸ್ಟೆಲ್ ಮೇಲೆ ಪತನವಾಯಿತು.
ಈ ವೇಳೆ ವಿಮಾನದಲ್ಲಿದ್ದ 241 ಜನರ ಪೈಕಿ 240 ಜನರು ಜೀವಂತವಾಗಿ ಸುಟ್ಟುಹೋಗಿದ್ದರು. ಈ ಘಟನೆಯ ಬಗ್ಗೆ ಇಟಲಿಯ ದೈನಿಕ ‘ಕೊರಿಯರ್ ಡೆಲ್ಲಾ ಸೆರಾ’ ಈ ತನಿಖಾ ವರದಿಯನ್ನು ಬಿತ್ತರಿಸಿದೆ.
ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ಮತ್ತು ಅಮೆರಿಕದ ತಜ್ಞರು ನಡೆಸಿದ ಜಂಟಿ ತನಿಖೆಯಲ್ಲಿ, ಇಂಜಿನ್ಗೆ ಇಂಧನ ಪೂರೈಕೆಯನ್ನು ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿರುವುದು ಪತ್ತೆಯಾಗಿದೆ. ಕಪ್ಪು ಪೆಟ್ಟಿಗೆಯ ದತ್ತಾಂಶಗಳ ಪ್ರಕಾರ, ವಿಮಾನದ ಇಂಜಿನ್ ಸ್ಥಗಿತಗೊಳಿಸುವ ಸ್ವಿಚ್ಗಳನ್ನು ಮ್ಯಾನುಯಲ್ ಆಗಿ ಆಫ್ ಮಾಡಲಾಗಿತ್ತು. ಕಾಕ್ಪಿಟ್ ವಾಯ್ಸ್ ರೆಕಾರ್ಡಿಂಗ್ನಲ್ಲಿ, ಒಬ್ಬ ಪೈಲಟ್ “ನೀನು ಇಂಧನ ಪೂರೈಕೆಯನ್ನು ಏಕೆ ನಿಲ್ಲಿಸಿದೆ?” ಎಂದು ಪ್ರಶ್ನಿಸಿರುವುದು ಮತ್ತು ಇನ್ನೊಬ್ಬರು “ನಾನು ಹಾಗೆ ಮಾಡಿಲ್ಲ” ಎಂದು ಉತ್ತರಿಸಿರುವುದು ದಾಖಲಾಗಿದೆ.
ಈ ಪ್ರಕರಣದಲ್ಲಿ ಪೈಲಟ್-ಇನ್-ಕಮಾಂಡ್ ಆಗಿದ್ದ ಕ್ಯಾಪ್ಟನ್ ಸುಮೀತ್ ಸಬರ್ವಾಲ್ ಅವರ ಮೇಲೆ ಹೆಚ್ಚಿನ ಅನುಮಾನ ವ್ಯಕ್ತವಾಗಿದೆ. ಅಪಘಾತ ಸಂಭವಿಸಿದ ಒಂದು ತಿಂಗಳ ನಂತರ ಹೊರಬಂದ ವರದಿಗಳ ಪ್ರಕಾರ, ಕ್ಯಾಪ್ಟನ್ ಸುಮೀತ್ ಅವರು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರ ವೈಯಕ್ತಿಕ ಜೀವನದ ಸಮಸ್ಯೆಗಳು ಮತ್ತು ವಿಚ್ಛೇದನದ ವದಂತಿಗಳು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರಬಹುದು ಎಂದು ಅನುಮಾನಿಸಲಾಗಿದೆ.
ದುರಂತದ ತನಿಖೆ ಕೈಗೊಂಡ ಅಮೆರಿಕದ ತಜ್ಞರ ತಂಡ ಕೂಡ, ಯಂತ್ರದಲ್ಲಿ ದೋಷವಿರಲಿಲ್ಲ ಮತ್ತು ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ಹೇಳಿರುವುದನ್ನು ಇಟಲಿ ಮಾಧ್ಯಮ ವರದಿ ಮಾಡಿದೆ. ಮಗ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದನ್ನು ಸುಮೀತ್ ಅವರ ತಂದೆಯೂ ಸರಾಸಗಟಾಗಿ ತಿರಸ್ಕರಿಸಿದ್ದಾರೆ.