ಭಟ್ಕಳವನ್ನು ಬಾಂಗ್ಲಾ ಮಾಡಲು ಹೊರಟಿದೆಯೇ ಕಾಂಗ್ರೆಸ್?; ಅನಂತಮೂರ್ತಿ ಹೆಗಡೆ ಪ್ರಶ್ನೆ
ಶಿರಸಿ: ಪ್ರಕೃತಿ ಸೌಂದರ್ಯಕ್ಕೆ ಹೆಸರಾದ, ಶಾಂತಿಪ್ರಿಯ ಜನರ ನೆಲೆಬೀಡಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಅಂದರೆ ಸೂಕ್ಷ್ಮ ಪ್ರದೇಶ, ಉಗ್ರರ ನೆಲೆವೀಡು, ಕ್ರೈಂ ರೇಟ್ ಜಾಸ್ತಿ ಎಂಬ ಆರೋಪ ಎದುರಿಸುತ್ತಿದೆ. ಅದರಲ್ಲೂ ಭಟ್ಕಳ ಮತ್ತು ಮುರುಡೇಶ್ವರದ ಆಸುಪಾಸಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ಅಪರಾಧ ಪ್ರಕರರಣಗಳು ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆಯೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರಲ್ಲಿ ಮೂಡಿಸಿವೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಾಂಕಾಳ ವೈದ್ಯ ಅವರ ಸ್ವ ಕ್ಷೇತ್ರದಲ್ಲೇ ಈ ರೀತಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಪ್ರಶ್ನಾರ್ಹವೂ ಹೌದು, ವಿಚಿತ್ರ ಎಂದರೆ ವೈದ್ಯರ ಕ್ಷೇತ್ರದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಕೂಡ ಮೌನ ವಹಿಸಿರುವ ಮರ್ಮ ಏನು ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.
ಸದಾ ಕಾಲ ಅಭಿವೃದ್ಧಿ ಮತ್ತು ಶಾಂತಿಯ ಮಾತಾಡುವ ಮಂಕಾಳ ವೈದ್ಯರು, ಹಿಂದೂಗಳ ಮನೆಗೆ ಕಲ್ಲು ಬಿದ್ದಾಗ ತುಟಿ ಬಿಚ್ಚದೇ ಮುಗುಮ್ಮಾಗಿ ಕುಳಿತಿದ್ದಾರೆ. ಕಲ್ಲು ಬಿದ್ದಿದ್ದು ಜನರ ಮನೆಗಳಿಗಲ್ಲ, ಬದಲಾಗಿ ನಮ್ಮ ಜಿಲ್ಲೆಯ ಕಾನೂನು ಗೌರವಕ್ಕೆ. ಆ ಕಲ್ಲು ಏನಾದರೂ ಜನರ ತಲೆಗೆ ಬಿದ್ದು ಜೀವಹಾನಿಯಾಗಿದ್ದರೆ ಅದರ ಜವಾಬ್ದಾರಿ ಯಾರು ಹೊರಬೇಕಿತ್ತು? ಅಲ್ಲದೇ ಈ ಘಟನೆಗೆ ಸಂಬಂಧಿಸಿ ಯಾವುದೇ ಕಾಂಗ್ರೆಸ್ ನಾಯಕರು, ಸಚಿವ ವೈದ್ಯರು ಖಂಡಿಸಿಲ್ಲ, ವೈದ್ಯರ ಸ್ವ ಕ್ಷೇತ್ರದಲ್ಲೇ ಇಂಥ ಘಟನೆ ನಡೆದಾಗ ಇದರ ನೇರ ಹೊಣೆ ಹೊರಬೇಕಾಗುತ್ತದೆ ಎಂದಿದ್ದಾರೆ.
ಅಪ್ರಾಪ್ತ ವಯಸ್ಸಿನ ಯುವಕರು ಗಾಂಜಾ ಅಮಲಿನಲ್ಲಿ ಅಥವಾ ಪ್ರಚೋದನೆಗೆ ಒಳಗಾಗಿ ಇಂತಹ ಕೃತ್ಯವೆಸಗುತ್ತಿದ್ದಾರೆ ಎನ್ನುವುದು ಆತಂಕಕಾರಿ ವಿಷಯ. ಈ ಯುವಕರಿಗೆ ಇಂತಹ ‘ಜಿಹಾದಿ ಮನಸ್ಥಿತಿ’ ಬರುತ್ತಿರುವುದು ಎಲ್ಲಿಂದ? ಮದರಸಗಳಲ್ಲಿ ಏನು ಕಲಿಸಲಾಗುತ್ತಿದೆ ಎಂಬ ಬಗ್ಗೆ ಪಾರದರ್ಶಕ ತನಿಖೆಯಾಗಬೇಕಿದೆ. ಮದರಸಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಅಲ್ಲಿ ನಡೆಯುವ ಬೋಧನೆಗಳ ಮೇಲೆ ನಿಗಾ ಇಡಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಅಲ್ಪಸಂಖ್ಯಾತರನ್ನು ಮಿತಿಮೀರಿ ಓಲೈಸುತ್ತಿರುವುದೇ ಇಂತಹ ಘಟನೆಗಳಿಗೆ ಪ್ರೇರಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ, ಕೊಲೆ, ದರೋಡೆ, ಗಾಂಜಾ ಮಾಫಿಯಾಗಳು ರಾಜಾರೋಷವಾಗಿ ನಡೆಯುತ್ತಿವೆ. ಹಿಂದೆ ನಾನು ಎಲ್ಲೆಲ್ಲೋ ಗುಂಡು ಹೊಡೆಯುತ್ತೇನೆ ಎಂದು ಅಬ್ಬರಿಸುತ್ತಿದ್ದ ಸಚಿವರು, ಈಗ ಜಿಲ್ಲೆಯಲ್ಲಿ ಅಕ್ರಮಗಳು ನಡೆಯುತ್ತಿದ್ದರೂ ಎಲ್ಲಿ ಅಡಗಿ ಕುಳಿತಿದ್ದಾರೆ? ನಿಮ್ಮ ಆ ಗುಂಡುಗಳು ಯಾರಿಗೆ, ಯಾವಾಗ? ಎಂದು ಜನ ಇಂದು ಕೇಳುತ್ತಿದ್ದಾರೆ. ಪೊಲೀಸರು ಕೇವಲ ಯುವಕರನ್ನು ಬಂಧಿಸಿ ಕೈತೊಳೆದುಕೊಂಡರೆ ಸಾಲದು, ಅವರ ಹಿಂದೆ ಇರುವ ಪ್ರಚೋದನಾಕಾರಿ ಶಕ್ತಿಗಳನ್ನು ಬೇರು ಸಮೇತ ಕಿತ್ತೆಸೆಯಬೇಕಿದೆ ಎಂದಿದ್ದಾರೆ.
ಭಟ್ಕಳವನ್ನಾಗಲಿ ಅಥವಾ ಜಿಲ್ಲೆಯ ಯಾವುದೇ ಭಾಗವನ್ನಾಗಲಿ ಮತ್ತೊಂದು ‘ಬಾಂಗ್ಲಾ’ ಮಾಡಲು ಇಲ್ಲಿನ ಜನರು ಬಿಡುವುದಿಲ್ಲ. ಹಿಂದೂಗಳು ತಮ್ಮದೇ ನೆಲದಲ್ಲಿ ಭಯದ ನೆರಳಿನಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಎಚ್ಚೆತ್ತುಕೊಂಡು ರಾಜಧರ್ಮ ಪಾಲಿಸಬೇಕು. ವೋಟ್ ಬ್ಯಾಂಕ್ಗಿಂತ ಜನರ ಜೀವ ಮುಖ್ಯ ಎಂಬುದು ಅವರಿಗೆ ನೆನಪಿರಲಿ. ಇಲ್ಲದಿದ್ದರೆ, ಈ ಅಸಮಾಧಾನದ ಕಿಚ್ಚು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವ್ಯಾಪಿಸುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದ್ದಾರೆ.