ಶಿರಸಿ: 21 ವರ್ಷ ದೊಳಗಿನ ಮಕ್ಕಳಿಗೆ ಕರೆಕ್ಷನ್ ವೈಟ್ನರ್ ಮಾರಾಟ ಮಾಡಬಾರದು ಎಂದು ಡಾ. ರವಿಕಿರಣ ಪಟವರ್ಧನ ಮನವಿ ಮಾಡಿದ್ದಾರೆ.
ಕರೆಕ್ಷನ್ ವೈಟ್ನರ್ ಸಾಮಾನ್ಯ ಬರವಣಿಗೆಯ ಉಪಕರಣವಾಗಿದ್ದರೂ, ಅದರಲ್ಲಿ ಇರುವ ವಾಸನೆಯುಕ್ತ ರಾಸಾಯನಿಕ ದ್ರವ್ಯಗಳು ಕೆಲ ಯುವಕರಿಂದ ದುರುಪಯೋಗಕ್ಕೆ ಒಳಗಾಗುತ್ತಿರುವುದು ತುಂಬಾ ದುಃಖಕರ ಸಂಗತಿ. ಕೇವಲ ಕ್ಷಣಿಕ ಮೋಜಿಗಾಗಿ ಇದನ್ನು ಬಳಸುವ ಪ್ರವೃತ್ತಿ ಕೆಲವು ಮಕ್ಕಳಲ್ಲಿ ಕಂಡುಬರುತ್ತಿದ್ದು, ಅದು ಅವರ ಮೆದುಳು, ಹೃದಯ ಹಾಗೂ ನರಮಂಡಲದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತಿದೆ.
21 ವರ್ಷ ದೊಳಗಿನ ಮಕ್ಕಳು ಮತ್ತು ಕಿಶೋರರು ಇಂತಹ ವಸ್ತುಗಳಿಗೆ ಸುಲಭವಾಗಿ ಒಳಗಾಗುವ ವಯಸ್ಸಿನವರಾಗಿದ್ದಾರೆ. ಒಮ್ಮೆ ಆರಂಭವಾದ ದುರುಪಯೋಗ ಕ್ರಮೇಣ ಅಭ್ಯಾಸವಾಗಿ, ಮುಂದೆ ಗಂಭೀರ ವ್ಯಸನಕ್ಕೆ ದಾರಿ ಮಾಡಿಕೊಡಬಹುದು. ಕೆಲ ಸಂದರ್ಭಗಳಲ್ಲಿ ಅಚಾನಕ್ ಪ್ರಜ್ಞಾಹಾನಿ ಹಾಗೂ ಜೀವಾಪಾಯದ ಘಟನೆಗಳಿಗೂ ಕಾರಣವಾಗುವ ಸಾಧ್ಯತೆ ಇದೆ.
ನಮ್ಮ ಅಂಗಡಿಗಳಿಂದ ಅನಾಯಾಸವಾಗಿ ನಡೆಯುವ ಒಂದು ಮಾರಾಟ, ಒಂದು ಕುಟುಂಬದ ಜೀವನವನ್ನು ದುಃಖದಲ್ಲಿ ಮುಳುಗಿಸಬಹುದು. ಆದ್ದರಿಂದ ಶಿರಸಿಯಲ್ಲಿರುವ ಸ್ಟೇಷನರಿ ಅಂಗಡಿಗಳು, ಜನರಲ್ ಸ್ಟೋರ್ಗಳು, ಕಿರಾಣಿ ಅಂಗಡಿಗಳು, ಸೂಪರ್ ಮಾರ್ಕೆಟ್ಗಳು ಹಾಗೂ ಇತರೆ ವ್ಯಾಪಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
21 ವರ್ಷ ದೊಳಗಿನವರಿಗೆ ಮಾರಾಟ ಮಾಡಬಾರದು, ಪದೇ ಪದೇ ಖರೀದಿಸುವವರ ಬಗ್ಗೆ ಗಮನಹರಿಸಬೇಕು ಹಾಗೂ ಅಂಗಡಿಗಳಲ್ಲಿ “21 ವರ್ಷ ದೊಳಗಿನವರಿಗೆ ವೈಟ್ನರ್ ಮಾರಾಟ ಇಲ್ಲ” ಎಂಬ ಸೂಚನಾ ಫಲಕ ಅಂಟಿಸಬೇಕು.
ಇದು ಕೇವಲ ವ್ಯಾಪಾರದ ವಿಷಯವಲ್ಲ; ಮಕ್ಕಳ ಸುರಕ್ಷತೆ ಮತ್ತು ಸಮಾಜದ ಜವಾಬ್ದಾರಿ ಎಂಬುದಾಗಿ ಡಾ. ರವಿಕಿರಣ ಪಟವರ್ಧನ ತಿಳಿಸಿದ್ದಾರೆ.