Friday, March 13, 2026
HomeLocal Newsಗದ್ದಿಗೆಯೇರಿದ ಮಾರಿಕಾಂಬೆ; ಕಣ್ತುಂಬಿಕೊಂಡ ಭಕ್ತ ಸಾಗರ

ಗದ್ದಿಗೆಯೇರಿದ ಮಾರಿಕಾಂಬೆ; ಕಣ್ತುಂಬಿಕೊಂಡ ಭಕ್ತ ಸಾಗರ

ಶಿರಸಿ: ಶಿರಸಿಯ ಐತಿಹಾಸಿಕ ಮಾರಿಕಾಂಬಾ ದೇವಾಲಯದಲ್ಲಿ ನಡೆಯುವ ಪ್ರಸಿದ್ಧ ಮಾರಿಕಾಂಬಾ ಜಾತ್ರಾ ಮಹೋತ್ಸವವು ಬುಧವಾರ ಭಕ್ತಿಭಾವದ ನಡುವೆ ಭವ್ಯವಾಗಿ ಆರಂಭಗೊಂಡಿತು. ಕರ್ನಾಟಕದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ಈ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

ಬುಧವಾರ ಬೆಳಗಿನ ಜಾವ ದೇವಿ ಮಾರಿಕಾಂಬೆಯ ಉತ್ಸವ ಮೂರ್ತಿಯನ್ನು ಮುಖ್ಯ ದೇವಾಲಯದಿಂದ ಶಿರಸಿ ಬಸ್ ನಿಲ್ದಾಣದ ಸಮೀಪದ ಗದ್ದಿಗೆಗೆ ಭವ್ಯ ರಥೋತ್ಸವದ ಮೂಲಕ ಕೊಂಡೊಯ್ಯಲಾಯಿತು. ದೇವಿಯ ರಥ ನಗರದಲ್ಲಿ ಸಂಚರಿಸುತ್ತಿದ್ದಂತೆ ಸಾವಿರಾರು ಭಕ್ತರು ಭಜನೆ, ನಾಮಸ್ಮರಣೆಗಳೊಂದಿಗೆ ಆಶೀರ್ವಾದ ಪಡೆದರು.

ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಜನಪದ ಕಲಾವಿದರು ಹಾಗೂ ವಾದ್ಯಗೋಷ್ಠಿಗಳು ರಥೋತ್ಸವಕ್ಕೆ ಮೆರಗು ತಂದವು. ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಇತರ ರಾಜ್ಯಗಳಿಂದ ಭಕ್ತರು ಶಿರಸಿಗೆ ಆಗಮಿಸಿದ್ದು, ನಗರವೇ ಭಕ್ತಿಸಾಗರವಾಗಿ ಕಂಗೊಳಿಸುತ್ತಿತ್ತು. ಜನಸಂದಣಿ ನಿಯಂತ್ರಣ ಹಾಗೂ ಭದ್ರತೆಗಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವವು ಒಂಬತ್ತು ದಿನಗಳ ಕಾಲ ನಡೆಯಲಿದ್ದು, ಮಾರ್ಚ್ 4ರಂದು ಸಂಪನ್ನಗೊಳ್ಲಲಿದೆ. ಈ ಅವಧಿಯಲ್ಲಿ ಭಕ್ತರು ಗದ್ದಿಗೆಯಲ್ಲಿ ದೇವಿಯ ದರ್ಶನ ಪಡೆಯಬಹುದಾಗಿದ್ದು, ಪ್ರತಿದಿನ ವಿಶೇಷ ಪೂಜೆಗಳು ನೆರವೇರಲಿವೆ.

ಭಕ್ತರ ಸೌಲಭ್ಯಕ್ಕಾಗಿ ದೇವಾಲಯ ಆಡಳಿತ ಮಂಡಳಿ ಸಮಗ್ರ ವ್ಯವಸ್ಥೆ ಮಾಡಿದ್ದು, ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ಪ್ರಕಾರ, ಈ ಬಾರಿ 20 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ವಾಹನ ಸಂಚಾರದ ಒತ್ತಡ ತಗ್ಗಿಸಲು ನಗರದ ಹೊರವಲಯದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ವಿಶಿಷ್ಟ ಸಂಪ್ರದಾಯದಂತೆ ಪ್ರಾಣಿಬಲಿ ಬದಲಿಗೆ ಬೂದು ಕುಂಬಳಕಾಯಿಯನ್ನು ಸಾಂಕೇತಿಕ ಬಲಿಯಾಗಿ ಗದ್ದಿಗೆಯ ಮುಂದೆ ಸಮರ್ಪಿಸಲಾಯಿತು.

ಹೆಚ್ಚಿನ ಭದ್ರತೆಗಾಗಿ ನಗರದೆಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನೂ ಎಂಟು ದಿನಗಳ ಕಾಲ ನಡೆಯಲಿರುವ ಜಾತ್ರಾ ಸಂಭ್ರಮದಲ್ಲಿ ದೇವಿ ಮಾರಿಕಾಂಬೆಯ ಆಶೀರ್ವಾದ ಪಡೆಯಲು ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share