ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮದಲ್ಲಿ ನಡೆದಿದೆ.
ಘಟನೆ ಸಂಬಂಧ ಬೈಕ್ ಸವಾರ ಪ್ರಕಾಶ ವಿಷ್ಣು ನಾಯ್ಕ (53), ವಾಗಳ್ಳಿ-ಮಾವಿನಮನೆ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಡಗುಂದಿ ಗ್ರಾಮದ ನಿವಾಸಿ ವಿನಾಯಕ ಶ್ರೀಕಾಂತ ದೇವಳಿ ನೀಡಿದ ದೂರಿನ ಪ್ರಕಾರ, ಜೂನ್ 10ರಂದು ರಾತ್ರಿ 9.25ರ ಸುಮಾರಿಗೆ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆ ಸಮೀಪದ ರಾಷ್ಟ್ರೀಯ ಹೆದ್ದಾರಿ 52ರ ಪಕ್ಕದಲ್ಲಿರುವ ಚಹಾ ಅಂಗಡಿ ಬಳಿ ಅವರ ಚಿಕ್ಕಪ್ಪ ಮಂಜುನಾಥ ನಾರಾಯಣ ದೇವಳಿ (58) ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಕೆಎ-31/ಯು-0963 ಸಂಖ್ಯೆಯ ಮೋಟಾರ್ಸೈಕಲ್ ಚಲಾಯಿಸಿಕೊಂಡು ಬರುತ್ತಿದ್ದ ಪ್ರಕಾಶ ನಾಯ್ಕ, ತನ್ನ ಮುಂದೆ ಸಾಗುತ್ತಿದ್ದ ಕಾರನ್ನು ಓವರ್ಟೇಕ್ ಮಾಡಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ಮಂಜುನಾಥ ದೇವಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಪಘಾತದ ಪರಿಣಾಮ ಮಂಜುನಾಥ ದೇವಳಿ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ಕಿವಿ ಹಾಗೂ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ಅಪಘಾತದಲ್ಲಿ ಮೋಟಾರ್ಸೈಕಲ್ ಕೂಡ ಹಾನಿಗೊಳಗಾಗಿದೆ.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ದೂರು ನೀಡಿರುವುದರಿಂದ ಪ್ರಕರಣ ದಾಖಲಿಸಲು ವಿಳಂಬವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಬೇರೆ ವಾಹನಗಳನ್ನು ಓವರ್ಟೇಕ್ ಮಾಡುವಾಗ ಎಚ್ಚರಿಕೆಯಿರಲಿ | ಒಂದು ಕ್ಷಣದ ಆತುರ ಮನೆಯ ದೀಪ ಆರಿಸಬಹುದು.