ನವದೆಹಲಿ/ ಯಲ್ಲಾಪುರ: ಮಾರ್ಚ್ 7ರಿಂದ 9ರವರೆಗೆ ದೆಹಲಿಯಲ್ಲಿ ಆಯೋಜಿಸಿರುವ “ಭಾರತಿ – ನಾರಿ ಸೇ ನಾರಾಯಣಿ” ರಾಷ್ಟ್ರೀಯ ಸಮ್ಮೇಳನದಲ್ಲಿ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹೇಶ ಭಟ್ಟ ಇಡಗುಂದಿ ಹಾಗೂ ವಿ. ಮಂಜುನಾಥ ಭಟ್ಟ ಇವರು ಸಂಗ್ರಹಿಸಿ ರಚಿಸಿರುವ `ಸೂಕ್ತಿ ಭಾರತಿ’ ಪುಸ್ತಕವನ್ನು ಕೇಂದ್ರೀಯ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಅನ್ನಪೂರ್ಣಾ ದೇವಿ ಲೋಕಾರ್ಪಣೆಗೊಳಿಸಿದರು.
ಸುಭಾಷಿತ, ವೇದ, ಶಾಸ್ತ್ರ, ಉಪನಿಷತ್ಗಳಲ್ಲಿ ಉಲ್ಲೇಖಿಸಿರುವಂತೆ ನಾರಿಯರ ಪ್ರಾಮುಖ್ಯತೆ, ಶಕ್ತಿ, ಪ್ರಶಂಸೆಗಳ ಕುರಿತು ಸಂಗ್ರಹಿಸಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತಾತ್ಪರ್ಯ, ಅರ್ಥಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಡಾ. ಮಹೇಶ ಭಟ್ಟ ಇಡಗುಂದಿ ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮಾತನಾಡಿ, ಭಾರತೀಯ ಮಹಿಳೆಯರು ತಮ್ಮದೇ ಆದ ಆಕಾಂಕ್ಷೆಗಳನ್ನು ವ್ಯಾಖ್ಯಾನಿಸಿಕೊಂಡು ದೃಢನಿಶ್ಚಯದಿಂದ ಅವುಗಳನ್ನು ಅನುಸರಿಸಿದರೆ ಸಮಾಜದ ಭವಿಷ್ಯವನ್ನು ರೂಪಿಸಬಹುದು ಎಂದು ಹೇಳಿದರು.
ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆ ಸಾಧಿಸುತ್ತಿದ್ದಾರೆ ಮತ್ತು ಆಗಾಗ ಪುರುಷ ಪ್ರತಿರೂಪಗಳಿಗಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ನಾಯಕತ್ವಕ್ಕೆ ಅಗತ್ಯವಿರುವ ಗುಣಗಳು – ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಧೈರ್ಯ ಮತ್ತು ಸಮರ್ಪಣೆ ಲಿಂಗದಿಂದ ನಿರ್ಧರಿಸಲ್ಪಡುವುದಿಲ್ಲ ಎಂದು ಗುಪ್ತಾ ಅಭಿಪ್ರಾಯಪಟ್ಟರು.