ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಶ್ರೀ ಗ್ರಾಮದೇವಿ ಜಾತ್ರೆ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ-52ರ ರಸ್ತೆ ಬದಿಗೆ ಅಂಗಡಿ ಮುಂಗಟ್ಟುಗಳನ್ನು ಹಾಕುವುದರಿಂದ ಜನದಟ್ಟಣೆಯಾಗಿ ವಾಹನ ಸಂಚಾರ ಅನಾನೂಕೂಲವಾಗುವುದರಿಂದ ಸುಗಮ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಫೆ. 10ರ ರಾತ್ರಿ 12 ಗಂಟೆಯಿಂದ ಫೆ. 19ರ ರಾತ್ರಿ 12 ಗಂಟೆಯವರೆಗೆ ಯಲ್ಲಾಪುರ ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಸಂಕಲ್ಪ ಹೋಟೆಲ್ ಕ್ರಾಸ್ನಿಂದ ಸಂಭ್ರಮ ಹೋಟೆಲ್ ಕ್ರಾಸ್ ವರೆಗೆ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಬದಲಿ ಸಂಚಾರ ಮಾರ್ಗವಾಗಿ, ಸಂಕಲ್ಪ ಕ್ರಾಸ್ನಿಂದ ಬಸ್ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ ಸರ್ಕಲ್ ಮುಖಾಂತರ ಸಂಭ್ರಮ ಕ್ರಾಸ್ನಿಂದ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ವಾಹನ ಸಂಚರಿಸುವುದು. ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗುವ ಲಘು ವಾಹನಗಳು ತಟಗಾರ ಕ್ರಾಸ್ನಿಂದ ನಿಸರ್ಗಮನೆ-ಗೇರುಕೊಂಬೆ ಚೆಕ್ ಪೋಸ್ಟ್-ಬಿಸ್ಗೋಡ ಕ್ರಾಸ್ ಮುಖಾಂತರ ರಾಷ್ಟ್ರೀಯ ಹೆದ್ದಾರಿ-52 ಮುಖಾಂತರ ಹುಬ್ಬಳ್ಳಿಗೆ ಸಂಚಾರಿಸುವುದು. ರಾಷ್ಟ್ರೀಯ ಹೆದ್ದಾರಿ-52 ಕೈಗಾದಿಂದ ಬರುವ ಭಾರೀ ಉದ್ದದ ಹಾಗೂ ಎತ್ತರದ ದೊಡ್ಡ ಕಂಟೇನರ್ ವಾಹನಗಳನ್ನು ಫೆ. 11ರಿಂದ ಫೆ. 19ರವರೆಗೆ ನಿಷೇಧಿಸಲಾಗಿದೆ.
ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗುವ ಭಾರಿ ವಾಹನಗಳು, ಇಡಗುಂದಿಯ ಭಾರಿ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಹಾಗೂ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಸಾಗುವ ಭಾರಿ ವಾಹನಗಳು, ಹಿಟ್ಟಿನ ಬೈಲ್ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಫೆ. 11ರಿಂದ ಫೆ. 19ರವರೆಗೆ ಪ್ರತಿ ದಿನ ಮದ್ಯಾಹ್ನ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ತಂಗುವುದು. ಫೆ. 11ರಿಂದ ಫೆ. 19ರವರೆಗೆ ಬೀಸಗೋಡ ಕ್ರಾಸ್-ಸಂಭ್ರಮ ಕ್ರಾಸ್-ಅಂಬೇಡ್ಕರ್ ಸರ್ಕಲ್-ಬೆಲ್ ರಸ್ತೆ- ಸಂಕಲ್ಪ ಕ್ರಾಸ್-ತಟಗಾರ ಕ್ರಾಸ್ವರೆಗಿನ ಎರಡೂ ಬದಿಯ ರಸ್ತೆಯಲ್ಲಿ ಯಾವುದೇ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.