ಯಲ್ಲಾಪುರ:ಬೆಂಗಳೂರಿನಲ್ಲಿ ನಡೆದ ನೀಟ್ ಪ್ರತಿಭಟನೆಯ ವೇಳೆ ʻಉಮರ್ ಖಾಲಿದ್ ಜಿಂದಾಬಾದ್ʼ ಎಂಬ ಭಿತ್ತಿಪತ್ರ ಹಿಡಿದಿದ್ದ ಯುವತಿಯ ವಿಚಾರವಾಗಿ ತನಿಖೆ ಪೂರ್ಣಗೊಂಡ ಬಳಿಕವೇ ಸತ್ಯಾಂಶ ಹೊರಬರಲಿದೆ. ಆ ವಿದ್ಯಾರ್ಥಿನಿಗೆ ಉಮರ್ ಖಾಲಿದ್ ಬಗ್ಗೆ ಮಾಹಿತಿ ಇತ್ತೋ ಇಲ್ಲವೋ, ಅಥವಾ ಯಾರಾದರೂ ಆಕೆಯ ಕೈಗೆ ಆ ಭಿತ್ತಿಪತ್ರ ನೀಡಿ ಹಿಡಿಯಲು ಹೇಳಿದ್ದಾರೋ ಎಂಬುದು ತನಿಖೆಯಿಂದಲೇ ತಿಳಿಯಬೇಕಾಗಿದೆ ಎಂದು ಬಿಜೆಪಿ ಕಾರ್ಯಕರ್ತ ರಾಮು ನಾಯ್ಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೆಎನ್ಯುನಲ್ಲಿ ದೇಶದ್ರೋಹದ ಆರೋಪ ಎದುರಿಸಿರುವ, 2020ರ ದೆಹಲಿ ಗಲಭೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಾಗೂ ಸಂಸತ್ ದಾಳಿಕೋರ ಅಫ್ಜಲ್ ಗುರುವಿನ ಪರವಾಗಿ ಬಹಿರಂಗವಾಗಿ ಧ್ವನಿ ಎತ್ತಿದ್ದ ಉಮರ್ ಖಾಲಿದ್ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಭಿತ್ತಿಪತ್ರ ಹಿಡಿದ ಯುವತಿಗೆ ಸೂಕ್ತ ಮಾರ್ಗದರ್ಶನ ನೀಡುವ ಬದಲು, ಆ ಭಿತ್ತಿಪತ್ರ ಹಿಡಿದರೆ ತಪ್ಪೇನು? ಎಂಬ ರೀತಿಯ ಹೇಳಿಕೆ ನೀಡಿರುವುದು ಖಂಡನೀಯ. ಇಂತಹ ಹೇಳಿಕೆಗಳು ಉಗ್ರವಾದದ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳನ್ನು ಪರೋಕ್ಷವಾಗಿ ಸಮರ್ಥಿಸುವಂತಿವೆ ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೆ, ಯುವತಿ ಹಿಡಿದಿದ್ದ ಭಿತ್ತಿಪತ್ರದಲ್ಲಿ “ಉಖಾಡ ಲೇ ಬೆಂಗಳೂರು ಪೊಲೀಸ್” ಎಂಬ ಬೆಂಗಳೂರು ಪೊಲೀಸರನ್ನು ಅವಹೇಳನ ಮಾಡುವ ಸಂದೇಶವೂ ಇದ್ದು, ಇಂತಹ ಭಾಷೆ ಬಳಸುವಂತೆ ಯಾರಾದರೂ ಪ್ರೇರೇಪಿಸಿದ್ದಾರೆಯೇ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ ಇಂತಹ ಸಂದೇಶದಲ್ಲಿಯೂ ಯಾವುದೇ ತಪ್ಪು ಕಾಣದಿದ್ದರೆ, ಅದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಯಾರನ್ನೂ ಸಮರ್ಥಿಸಲು ಸಿದ್ಧವಾಗಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ ಎಂದು ರಾಮು ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.