ಯಲ್ಲಾಪುರ: ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ನಿರ್ದೇಶನದಂತೆ ಶಿವರಾತ್ರಿಯ ದಿನವಾದ ರವಿವಾರ ಬೇಡ್ತಿ ಸೇತುವೆಯ ತಟದಲ್ಲಿ ನದಿಪೂಜೆ ನೆರವೇರಿಸಲಾಯಿತು.
ಬೇಡ್ತಿ- ನದೀ ತಿರುವು ಆಗಕೂಡದು, ಪವಿತ್ರವಾದ ನಮ್ಮ ನದಿ,ಹಳ್ಳಗಳ ಉಳಿವಿಗಾಗಿ ಗಂಗಾಮಾತೆಯಲ್ಲಿ ನಮ್ಮ ನದಿ, ನಮ್ಮ ನೀರು, ನಮ್ಮ ಭೂಮಿ ನಮ್ಮದಾಗಿಯೇ ಉಳಿಯುವಂತೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ಹಿರಿಯರಾದ ವೇ.ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಅವರು ಸಂಕಲ್ಪ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಿ ನದಿ ಪೂಜೆಯನ್ನು ನೆರವೇರಿಸಿದರು.
ಜಾಗಟೆ, ಶಂಕನಾದ, ಮಂತ್ರಘೋಷಗಳ ಮೂಲಕ ತಟದಲ್ಲಿ ಸೇರಿದ್ದ ಜನಸ್ತೋಮ ನದಿಗೆ ಗಂಗಾರತಿ ನಡೆಸಿದರು. ಚಂದ್ಗುಳಿ, ಮಳಲಗಾಂವ್, ಹುತ್ಕಂಡ, ಜೂಜನಬೈಲ್, ಮಂಚಿಕೇರಿ, ಹಾಸಣಗಿ, ತೂಕದಬೈಲ್, ಉದ್ದಾಬೈಲ್, ಕವಡಿಕೆರೆ, ಬಾಳೆಗದ್ದೆ, ಮಾಗೋಡ, ತಾರಿಮಕ್ಕಿ ಭಾಗದ ಮಹಿಳೆಯರೂ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ಎಲ್.ಎಸ್.ಎಂ.ಪಿ ಅಧ್ಯಕ್ಷ ನಾಗರಾಜ ಕವಡಿಕೇರಿ, ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ ಸಂಚಾಲಕ ನರಸಿಂಹ ಸಾತೊಡ್ಡಿ, ಬೇಡ್ತಿ ಸಮಿತಿಯ ಮಾದ್ಯಮ ಸಂಚಾಲಕ ಹರಿಪ್ರಕಾಶ ಕೋಣೆಮನೆ, ಹಿರಿಯರಾದ ನಾಗೇಶ ಭಟ್ಡ ಮಳಲಗಾಂವ್, ಪ್ರಮುಖರಾದ ಸುಬ್ಬಣ್ಣ ಉದ್ದಾಬೈಲ್, ವಿಶ್ವನಾಥ ಬಾವಣಕೊಪ್ಪ, ವಸಂತ ಭಟ್ಟ ಹಾಸಣಗಿ, ಮಂಜುನಾಥ ಬರಾಳ, ರಾಮಕೃಷ್ಣ ಕವಡಿಕೆರೆ, ನಾರಾಯಣ ಬೆಳಸೂರು, ರಾಮಕೃಷ್ಣ ಭಟ್ಟ ಮಳಲಗಾಂವ್, ಪರಮೇಶ್ವರ ಭಾಗ್ವತ, ನರಸಿಂಹ ಜೂಜನಬೈಲ್ ಮತ್ತಿತರರು ಉಪಸ್ಥಿತರಿದ್ದರು.