Saturday, May 30, 2026
HomeCrimeಗೋಪಾಲಕೃಷ್ಣ ನಾಯಕ ಹ*ತ್ಯೆಗೆ ಸುಪಾರಿ?!

ಗೋಪಾಲಕೃಷ್ಣ ನಾಯಕ ಹ*ತ್ಯೆಗೆ ಸುಪಾರಿ?!

ಅಂಕೋಲಾ: ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಿಸಿಟಿವಿ ದೃಶ್ಯಗಳು ದಾಳಿಯ ಹಿಂದೆ ನಡೆದ ಸಂಚಿನ ಸುಳಿವುಗಳನ್ನು ಬಿಚ್ಚಿಟ್ಟಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಯಾನಕ ಸಿಸಿಟಿವಿ ದೃಶ್ಯಗಳು ಬಹಿರಂಗವಾಗಿವೆ. ದಾಳಿಗೆ ಮುನ್ನ ಆರೋಪಿಗಳು ಅವರನ್ನು ಹಿಂಬಾಲಿಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.

ಲಭ್ಯವಾದ ಸಿಸಿಟಿವಿ ದೃಶ್ಯಗಳಲ್ಲಿ, ಗೋಪಾಲಕೃಷ್ಣ ನಾಯಕ ತಮ್ಮ ಸ್ನೇಹಿತ ರಾಘವೇಂದ್ರ ಅವರೊಂದಿಗೆ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತಿದ್ದು, ಅವರ ಹಿಂದೆ ಐದು ಮಂದಿ ಶಂಕಿತರು ಕಾಲ್ನಡಿಗೆಯಲ್ಲಿ ಹಿಂಬಾಲಿಸುತ್ತಿರುವುದು ಸ್ಪಷ್ಟವಾಗಿದೆ.

ಒಂದು ಪ್ರಮುಖ ಫ್ರೇಮ್‌ನಲ್ಲಿ ಶಂಕಿತರಲ್ಲಿ ಒಬ್ಬನ ಟೀ-ಶರ್ಟ್, ಮಾಜಾಳಿ ಚೆಕ್‌ಪೋಸ್ಟ್ ಬಳಿ ಬಂಧಿತನಾದ ವ್ಯಕ್ತಿಯ ಉಡುಪಿಗೆ ಹೋಲಿಕೆಯಾಗಿರುವುದು ಗಮನ ಸೆಳೆಯುತ್ತದೆ. ಇನ್ನೊಬ್ಬನು ಮೊಬೈಲ್‌ನಲ್ಲಿ ಮಾತನಾಡುತ್ತಾ ಹಿಂಬಾಲಿಸುತ್ತಿರುವುದೂ ಕಾಣಿಸಿದೆ.
ಈ ದೃಶ್ಯಗಳು ದಾಳಿ ಪೂರ್ವ ಯೋಜಿತವಾಗಿದ್ದು, ಸುಪಾರಿ ಕೊಟ್ಟು ಹ*ತ್ಯೆ ಯತ್ನ ನಡೆದಿದೆ ಎಂಬ ಪೊಲೀಸರ ಅನುಮಾನವನ್ನು ಮತ್ತಷ್ಟು ಬಲಪಡಿಸುತ್ತಿವೆ.

ಗೃಹ ಸಚಿವರ ಆಪ್ತರಾಗಿರುವ ಗೋಪಾಲಕೃಷ್ಣ ನಾಯಕ ಮೇಲೆ ಆರು ಮಂದಿ ದಾಳಿ ನಡೆಸಿ, ಹೊಟ್ಟೆ ಹಾಗೂ ತಲೆಗೆ ಹಲವು ಬಾರಿ ಚೂರಿಯಿಂದ ಇರಿದಿದ್ದಾರೆ. ಈ ದಾಳಿಯಲ್ಲಿ ಗೋಪಾಲಕೃಷ್ಣ ನಾಯಕ ಮತ್ತು ರಾಘವೇಂದ್ರ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅಂಕೋಲಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಆರು ಆರೋಪಿಗಳಲ್ಲಿ ನಾಲ್ವರನ್ನು ಗೋವಾ ಕಡೆಗೆ ಪರಾರಿಯಾಗುವ ವೇಳೆ ಪೊಲೀಸರು ಬಂಧಿಸಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ, ದಾಳಿಗೆ ಬಳಸಿದ ವಾಹನ ಗೋವಾ ನೋಂದಣಿ ಹೊಂದಿದ್ದ ಕಾರಾಗಿದ್ದು, ಕೆಲವು ಆರೋಪಿಗಳು ಬಿಹಾರ ಮೂಲದವರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಸ್ವತಃ ತನಿಖೆಯ ಮೇಲ್ವಿಚಾರಣೆ ಮಾಡುತ್ತಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈ ದಾಳಿಯ ಹಿಂದಿರುವ ಮೂಲ ಸಂಚು ಯಾರು ರೂಪಿಸಿದರು, ಸುಪಾರಿ ನೀಡಿದವರು ಯಾರು ಎಂಬ ಪ್ರಶ್ನೆಗಳಿಗೆ ಪೊಲೀಸ್‌ ತನಿಖೆಯ ನಂತರವಷ್ಟೇ ಉತ್ತರ ದೊರೆಯಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share