ಕಾರವಾರ: ಕ್ಷತ್ರಿಯ ಸಮಾಜದ ಆರಾಧ್ಯ ದೈವವಾಗಿರುವ ಶ್ರೀ ಅಗ್ನಿಬನ್ನಿರಾಯರು ಭಾರತೀಯ ಪರಂಪರೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇವರು ಕೇವಲ ಒಂದೇ ಸಮಾಜಕ್ಕೆ ಸೀಮಿತರಾಗದೇ, ಸಮಸ್ತ ಜನಾಂಗದ ಏಳಿಗೆಗಾಗಿ ಶ್ರಮಿಸಿದವರು ಎಂದು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ತಹಸೀಲ್ದಾರ ಪ್ರಮೋದ ನಾಯ್ಕ ಹೇಳಿದರು.
ಅವರು ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಅಗ್ನಿಬನ್ನಿರಾಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಗ್ನಿಬನ್ನಿರಾಯ ಕುರಿತು ಶಿವಾಜಿ ಕಲಾ, ವಾಣಿಜ್ಯ ಹಾಗೂ ಬಿ.ಸಿ.ಎ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಎ.ಜಿ. ಕೆರಳೆಕರ ವಿಶೇಷ ಉಪನ್ಯಾಸ ನೀಡಿ, ಕ್ಷತ್ರಿಯ ಜನಾಂಗದ ಅಗ್ನಿಬನ್ನಿರಾಯರು ಸರ್ವಜನರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡವರು.
ತಿಗಳ ಸಮಾಜದ ಆರಾಧ್ಯದೈವ ಅಷ್ಟೇ ಅಲ್ಲದೇ ಸರ್ವ ಜನಾಂಗದ ಆರಾಧ್ಯ ದೈವವಾಗಿದ್ದಾರೆ. ಅವರದ್ದು ಜನರಲ್ಲಿ ಮಾನವೀಯತೆ, ಕರುಣೆ ಮತ್ತು ಧರ್ಮದ ಮೌಲ್ಯಗಳನ್ನು ಬಿತ್ತಿದ ಮಹಾನ್ ವ್ಯಕ್ತಿತ್ವ. ಜನರ ಕಷ್ಟ-ಕಾರ್ಪಣ್ಯಗಳನ್ನು ಅರಿತು ಅವುಗಳಿಗೆ ಸೂಕ್ತ ಸಲಹೆ ನೀಡಿ, ಕಾರ್ಯಚಾರಣೆಗೆ ತಂದು ಮನುಕುಲಕ್ಕೆ ಉನ್ನತಿಗೆ ಕಾರಣರಾಗಿದ್ದಾರೆ. ಅವರ ಆದರ್ಶಗಳು ಅನುಕರಣೀಯ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸಂಜೀವ್ ಕುಮಾರ್, ಸ್ಟಾರ್ ಚಾಯ್ಸ್ ತಂಡದ ರಾಜನ್ ಎಂ. ಬಾನವಳಿಕರ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವೆಂ. ನಾಯ್ಕ ಸ್ವಾಗತಿಸಿದರು. ಸ್ಟಾರ್ ಚಾಯ್ಸ್ ತಂಡದ ಸದಸ್ಯೆ ಎಲ್. ತ್ರಿವೇಣಿ ನಿರೂಪಿಸಿ, ವಂದಿಸಿದರು.