ಅಂಕೋಲಾ: ಅಂಕೋಲಾದಲ್ಲಿ ಇತ್ತೀಚೆಗೆ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಹಕಾರಿ ಕ್ಷೇತ್ರದ ರಾಜಕೀಯ ದ್ವೇಷ ಕಾರಣವಾಗಿರಬಹುದು ಎಂದು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ.
ಅಂಕೋಲಾದ ಕಣಕಣೇಶ್ವರ ದೇವಸ್ಥಾನ ಸಮೀಪ ನಡೆದ ಘಟನೆಯಲ್ಲಿ, ಕೆಲ ದುಷ್ಕರ್ಮಿಗಳು ಗೋಪಾಲಕೃಷ್ಣ ನಾಯಕ ಅವರ ಮೇಲೆ ರಾಡ್ ಮತ್ತು ಚಾಕುಗಳಿಂದ ದಾಳಿ ನಡೆಸಿದ್ದರು.
ಈ ವೇಳೆ ಗೋಪಾಲಕೃಷ್ಣ ನಾಯಕ್ ಸಮೀಪದ ಬ್ಯಾಂಕ್ ಒಳಗೆ ತೆರಳಿ ಜೀವ ರಕ್ಷಣೆ ಮಾಡಿಕೊಂಡಿದ್ದರು. ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಪಡೆದ ನಂತರ ಗುಣಮುಖರಾದ ಅವರು ಕಾರವಾರಕ್ಕೆ ಮರಳಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಅಂಕೋಲಾದ ಟಿಎಂಎಸ್ ಸೊಸೈಟಿ ಚುನಾವಣೆಯಲ್ಲಿ ತಮ್ಮ ಪರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ರಾಜಕೀಯ ವಿರೋಧ ಉಂಟಾಗಿರಬಹುದು ಎಂದು ಅಭಿಪ್ರಾಯಪಟ್ಟರು. ಚುನಾವಣೆಯ ಸಂದರ್ಭ ಕೆಲ ಒತ್ತಡಗಳನ್ನು ಎದುರಿಸಿದ್ದಾಗಿ ಅವರು ಉಲ್ಲೇಖಿಸಿದರು.
ಇದೇ ವೇಳೆ ಶಾಸಕ ಸತೀಶ್ ಸೈಲ್ ಅವರೊಂದಿಗೆ ಭಿನ್ನಾಭಿಪ್ರಾಯವಿರುವುದನ್ನು ಒಪ್ಪಿಕೊಂಡ ಅವರು, “ಈ ಘಟನೆಯ ಹಿಂದೆ ಅವರು ನೇರವಾಗಿ ಇದ್ದಾರೆ ಎಂದು ನಾನು ಹೇಳುವುದಿಲ್ಲ. ಆದರೆ ಈ ಘಟನೆಗೆ ಸಂಬಂಧಿಸಿದ ವಿಚಾರಗಳಲ್ಲಿ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ” ಎಂದು ಹೇಳಿದರು.
ಹಿಂದಿನ ಕೆಲವು ರಾಜಕೀಯ ಘಟನೆಗಳನ್ನೂ ಅವರು ಉಲ್ಲೇಖಿಸಿ, ತಮ್ಮ ಮತ್ತು ಕೆಲವು ನಾಯಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಸ್ಮರಿಸಿದರು.
ಇನ್ನು, ತಾವು ಆಸ್ಪತ್ರೆಯಲ್ಲಿ ಇದ್ದ ಸಂದರ್ಭದಲ್ಲಿ ಕೆಲ ರಾಜಕೀಯ ನಾಯಕರು ತಮ್ಮ ಆರೋಗ್ಯ ವಿಚಾರಿಸಿದ್ದಾಗಿ ತಿಳಿಸಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ನಿಖರ ಕಾರಣ ಹಾಗೂ ಆರೋಪಿಗಳ ಹಿನ್ನೆಲೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.