ಪ್ರತಿ ಬೆಳಗ್ಗೆಯೂ ದೇವರು ನಮಗೆ ಒಂದು ಹೊಸ ಅವಕಾಶವನ್ನು ಕೊಟ್ಟಿರುತ್ತಾನೆ. ನಿನ್ನೆ ಸೋತಿದ್ದರೆ ಮತ್ತೆ ಗೆಲ್ಲಲು, ತಪ್ಪು ಮಾಡಿಕೊಂಡಿದ್ದರೆ ಸರಿಪಡಿಸಲು, ಕನಸು ಅರ್ಧದಲ್ಲೇ ನಿಂತಿದ್ದರೆ ಅದನ್ನು ಮತ್ತೆ ಹಿಡಿದು ಓಡಲು ಬೆಳಗ್ಗೆ ಎನ್ನುವುದು ಬದುಕಿನ ಹೊಸ ಅಧ್ಯಾಯದ ಮೊದಲ ಪುಟ!
ಅನೇಕರು ಯಶಸ್ಸು ಎಂದರೆ ದೊಡ್ಡ ಅವಕಾಶಗಳು, ದೊಡ್ಡ ಪರಿಚಯಗಳು ಅಥವಾ ಅದೃಷ್ಟ ಎಂದು ಭಾವಿಸುತ್ತಾರೆ. ಆದರೆ ನಿಜವಾದ ಯಶಸ್ಸು ಬಹುಸಾರಿ ದಿನದ ಮೊದಲ ಒಂದು ಗಂಟೆಯಲ್ಲಿ ಹುಟ್ಟುತ್ತದೆ. ನಾವು ಬೆಳಿಗ್ಗೆ ಎದ್ದು ಹೇಗೆ ಯೋಚಿಸುತ್ತೇವೆ, ಹೇಗೆ ನಡೆದುಕೊಳ್ಳುತ್ತೇವೆ, ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬುದೇ ನಮ್ಮ ದಿನದ ದಿಕ್ಕನ್ನು ನಿರ್ಧರಿಸುತ್ತದೆ.
ಬೆಳಿಗ್ಗೆ ಬೇಗ ಎದ್ದವನೇ ಯಶಸ್ವಿ ಎಂಬುದು ಸಂಪೂರ್ಣ ಸತ್ಯವಲ್ಲ. ಎದ್ದ ಮೇಲೆ ಆತ ತನ್ನ ಸಮಯವನ್ನು ಹೇಗೆ ಬಳಸುತ್ತಾನೆ ಎಂಬುದೇ ಮುಖ್ಯ. ಕೆಲವರು ದಿನವನ್ನು ದೂರುಗಳಿಂದ ಆರಂಭಿಸುತ್ತಾರೆ, ಕೆಲವರು ಗುರಿಯಿಂದ ಆರಂಭಿಸುತ್ತಾರೆ. ಕೆಲವರು “ಇನ್ನೂ ಸಮಯ ಇದೆ” ಎಂದು ಮುಂದೂಡುತ್ತಾರೆ, ಮತ್ತೊಬ್ಬರು “ಇಂದೇ ನನ್ನ ದಿನ” ಎಂದು ಕೆಲಸಕ್ಕೆ ಇಳಿಯುತ್ತಾರೆ. ಇದೇ ವ್ಯತ್ಯಾಸ ಮುಂದೆ ಬದುಕಿನ ಫಲಿತಾಂಶವಾಗುತ್ತದೆ.
ಬೆಳಿಗ್ಗೆ ಸ್ವಲ್ಪ ಸಮಯ ಮೌನವಾಗಿ ಕುಳಿತುಕೊಳ್ಳುವುದು, ದಿನದ ಗುರಿ ಬರೆಯುವುದು, ಒಳ್ಳೆಯ ಪುಸ್ತಕದ ಎರಡು ಪುಟ ಓದುವುದು, ಮನೆಯವರೊಂದಿಗೆ ನಗು ಹಂಚಿಕೊಳ್ಳುವುದು ಇವೆಲ್ಲವೂ ಜೀವನವನ್ನು ನಿಧಾನವಾಗಿ ಆದರೆ ಗಟ್ಟಿಯಾಗಿ ಬದಲಾಯಿಸುತ್ತವೆ. ಯಶಸ್ಸು ಒಂದು ದಿನದಲ್ಲಿ ಬರುವುದಿಲ್ಲ, ಅದು ಪ್ರತಿದಿನದ ಸಣ್ಣ ಶಿಸ್ತಿನ ಫಲ.
ನಾವು ಎಲ್ಲರೂ ಜೀವನದಲ್ಲಿ ಏನಾದರೂ ದೊಡ್ಡದನ್ನು ಸಾಧಿಸಬೇಕೆಂದು ಕನಸು ಕಾಣುತ್ತೇವೆ. ಆದರೆ ದೊಡ್ಡ ಸಾಧನೆಗೆ ದಾರಿ ಸಣ್ಣ ನಿರ್ಧಾರಗಳಿಂದಲೇ ಆರಂಭವಾಗುತ್ತದೆ. ಆ ನಿರ್ಧಾರಗಳಲ್ಲಿ ಅತ್ಯಂತ ಮುಖ್ಯವಾದುದು “ಇಂದು ನಾನು ನಿನ್ನೆಗಿಂತ ಉತ್ತಮವಾಗಿರಬೇಕು” ಎಂಬ ಸಂಕಲ್ಪ.
ಪ್ರತಿ ಸೂರ್ಯೋದಯವೂ ಒಂದು ಸಂದೇಶ ನೀಡುತ್ತದೆ. ಕತ್ತಲೆ ಶಾಶ್ವತವಲ್ಲ. ಎಷ್ಟು ಕಷ್ಟ ಬಂದರೂ ಹೊಸ ಆರಂಭ ಸಾಧ್ಯ. ಆದ್ದರಿಂದ ಬೆಳಗ್ಗೆಯನ್ನು ಕೇವಲ ಸಮಯವಾಗಿ ನೋಡಬೇಡಿ, ಅದನ್ನು ಒಂದು ಅವಕಾಶವಾಗಿ ನೋಡಿ.
ನಿದ್ರೆ ಮುಗಿದರೆ ದಿನ ಆರಂಭವಾಗುವುದಿಲ್ಲ. ಗುರಿ ನೆನಪಾದಾಗ ದಿನ ಆರಂಭವಾಗುತ್ತದೆ. ಇಂದು ಎದ್ದಿದ್ದೀರಾ? ಹಾಗಾದರೆ ಗೆಲ್ಲಲು ಇನ್ನೂ ಸಮಯ ಇದೆ!
– ಸೌಪರ್ಣಿಕಾ.