ಯಲ್ಲಾಪುರ: ತಾಲೂಕಿನ ಇಡಗುಂದಿ ಸೊಸೈಟಿಯ ಮಹೇಂದ್ರ ಬೊಲೇರೊ ಪಿಕಪ್ ವಾಹನ ಉಳವಿ–ಶಿವಪುರ ಮಾರ್ಗದಲ್ಲಿ ಪಲ್ಟಿಯಾದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆದರೆ ವಾಹನ ಜಖಂಗೊಂಡಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಏಪ್ರಿಲ್ 22ರಂದು ಸಂಜೆ ಸುಮಾರು 6.30ರ ಸುಮಾರಿಗೆ ಸೊಸೈಟಿಗೆ ಸೇರಿದ ಮಹೇಂದ್ರ ಬೊಲೇರೊ ಪಿಕಪ್ ವಾಹನ (KA 31, A 3900) ಉಳವಿಯಿಂದ ಶಿವಪುರದ ಕಡೆಗೆ ತೆರಳುತ್ತಿತ್ತು. ಈ ವೇಳೆ ವಾಹನವನ್ನು ಚಾಲಕ ಗೋಪಾಲಕೃಷ್ಣ ನಾರಾಯಣ ಗೌಡ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದನೆಂದು ಆರೋಪಿಸಲಾಗಿದೆ.
ಗದ್ದೆಮನೆ ಸಮೀಪದ ರಸ್ತೆ ತಿರುವಿನ ತಗ್ಗಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ಯಾವುದೇ ವ್ಯಕ್ತಿಗೆ ಗಾಯಗಳಾಗಿಲ್ಲದಿದ್ದರೂ, ವಾಹನಕ್ಕೆ ಹಾನಿಯಾಗಿದೆ.
ಹಂಸನಗದ್ದೆ, ಬಳಗಾರ ನಿವಾಸಿ ಹಾಗೂ ಇಡುಗುಂದಿ ಸೊಸೈಟಿಯ ಸಿಬ್ಬಂದಿ ವಿನಯ ವಾಸುದೇವ ಭಟ್ಟ (28) ಅವರು ಈ ಕುರಿತು ದೂರು ನೀಡಿದ್ದಾರೆ.
ವಾಹನ ಜಖಂಗೊಳಿಸಿದ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.