ಹೊನ್ನಾವರ: ಆಹಾರ ಸುರಕ್ಷತೆ ಮತ್ತು ಔಷಧ (ಆಡಳಿತ ಹಾಗೂ ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಕೇಂದ್ರ ಇವರ ವತಿಯಿಂದ ಹೊನ್ನಾವರದ ಆಹಾರ ವಹಿವಾಟುದಾರರಿಗೆ ಮೊದಲ ಹಂತದ ಒಂದು ದಿನದ ಆಹಾರ ಸುರಕ್ಷತಾ ಮತ್ತು ಪ್ರಮಾಣ ಪತ್ರ ಕಾರ್ಯಕ್ರಮವನ್ನು ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಆಹಾರ ಶಿರಸ್ತೆದಾರ ವೆಂಕಟ್ರಮಣ ಹಳದಿಪುರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡುಕೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹೊನ್ನಾವರ ತಾಲೂಕು ಆರೋಗ್ಯಾಧಿಕಾರಿ ಡಾ. ವೈಶಾಲಿ ಮಾತನಾಡಿ, ಆಹಾರೋದ್ಯಮಿಗಳಿಗೆ ಆಹಾರದ ಗುಣಮಟ್ಟದ ಜೊತೆ ಶುಚಿತ್ವ ಹಾಗೂ ಪರಿಸರ ನೈರ್ಮಲ್ಯತೆ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಹಾಗೂ ತಾಲೂಕಿನ ಪ್ರತಿಯೊಬ್ಬ ಆಹಾರ ವಹಿವಾಟುದಾರರು ಪ್ರಮಾಣ ಪತ್ರವನ್ನು ಪಡೆದುಕೊಂಡು ಕಾರ್ಯನಿರ್ವವಹಿಸುವಂತೆ ಸೂಚಿಸಿದರು.
ಉತ್ತರ ಕನ್ನಡ ಜಿಲ್ಲಾ ಸಂಯೋಜಕರಾದ ಮನೋಜ್ ನಾಯ್ಕ ಮಾತನಾಡಿ, ಇನ್ನೂ ಕೆಲವು ದಿನಗಳಲ್ಲಿ ಹೊನ್ನಾವರದಲ್ಲಿ ಇನ್ನೊಂದು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದು, ಈ ಕಡ್ಡಾಯ ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರದ ಪ್ರಯೋಜನವನ್ನು ಎಲ್ಲಾ ಆಹಾರ ವಹಿವಾಟುದಾರರು ಪಡೆದುಕೊಳ್ಳಲು ಸೂಚಿಸಿದರು.
ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರದ ಕೇಂದ್ರದ ರಾಜ್ಯಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಗೂ ತರಬೇತುದಾರರಾದ ಸವಿತಾ ಡಿ.ವಿ ಅವರು ಆಹಾರ ಸುರಕ್ಷತಾ ಪ್ರಮಾಣ ಪತ್ರ ಕೇಂದ್ರ ಭಾರತದ ಸರ್ಕಾರ ಇವರು ಎಲ್ಲಾ ವಾಹಿವಾಟುದಾರರಿಗೆ ವಹಿವಾಟುಗಳ ನಿರ್ವಹಣೆ ಸುರಕ್ಷತಾ ಕ್ರಮ, ಶುಚಿತ್ವ, ಕಲಬೆರಕೆ, ಅನಾವಶ್ಯಕ ಖರ್ಚು, ನಿಯಂತ್ರಣ ಮತ್ತು ಕಡ್ಡಾಯ ಪ್ರಮಾಣಪತ್ರದ ಮಹತ್ವದ ಬಗ್ಗೆ ತರಬೇತಿ ನೀಡಿದರು.
ನಿವೃತ್ತ ಆಹಾರ ಸುರಕ್ಷತಾ ಅಧಿಕಾರಿ ಹಾಗೂ ಸಲಹೆಗಾರ ಅರುಣ ಕಾಶಿಭಟ್ ಇದ್ದರು.