ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ವಿವಿಧ ಪ್ರಕರಣಗಳಲ್ಲಿ ಜಪ್ತುಪಡಿಸಿಕೊಂಡಿದ್ದ ಗಾಂಜಾವನ್ನು ಮಂಗಳವಾರ ಅಂಕೋಲಾದಲ್ಲಿ ನಾಶಪಡಿಸಲಾಯಿತು.
ಶಿರಸಿ ವಲಯದ 4, ದಾಂಡೇಲಿ ವಲಯದ 1 ಹಾಗೂ ಕುಮಟಾ ವಲಯದ 1 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು 11.265 ಕೆ.ಜಿ ತೂಕದ, ಅಂದಾಜು 3 ಲಕ್ಷ ರೂ. ಮೌಲ್ಯದ ಒಣ ಗಾಂಜಾವನ್ನು ಡ್ರಗ್ ಡಿಸ್ಪೋಸಲ್ ಕಮಿಟಿಗೆ ಹಸ್ತಾಂತರಿಸಲಾಗಿತ್ತು. ವಿವಿಧ ನ್ಯಾಯಾಲಯಗಳ ಆದೇಶದಂತೆ ಈ ಮಾದಕ ವಸ್ತುವನ್ನು ವಿಲೇವಾರಿ ಮಾಡಲಾಯಿತು.
ಅಂಕೋಲಾದ ಜೀವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ಇನ್ಸಿನರೇಟರ್ನಲ್ಲಿ ಪ್ರಕರಣವಾರು ಗಾಂಜಾವನ್ನು ಬೆಂಕಿಗೆ ಆಹುತಿ ನೀಡುವ ಮೂಲಕ ನಾಶಪಡಿಸಲಾಯಿತು.
ಈ ಪ್ರಕ್ರಿಯೆ ಡ್ರಗ್ ಡಿಸ್ಪೋಸಲ್ ಕಮಿಟಿ ಅಧ್ಯಕ್ಷ ಹಾಗೂ ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಎ.ಎಲ್. ನಾಗೇಶ್, ಕಮಿಟಿ ಸದಸ್ಯರಾದ ಕಾರವಾರ ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ ಮತ್ತು ಉಡುಪಿ ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಅವರ ಸಮ್ಮುಖದಲ್ಲಿ ನಡೆಯಿತು.
ಇದಲ್ಲದೆ, ಅಬಕಾರಿ ಇಲಾಖೆಯ ತನಿಖಾಧಿಕಾರಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರದ ಫೀಲ್ಡ್ ಅಧಿಕಾರಿ ಪ್ರಥಮೇಶ ಮೇತ್ರಿ ಹಾಗೂ ಅಂಕೋಲಾದ ಜೀವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.