ಮುಂಡಗೋಡ: ನಕಲಿ ಬಂಗಾರದ ಆಭರಣಗಳನ್ನು ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಬೊಮ್ಮನಳ್ಳಿ ನಿವಾಸಿ ಸಂತೋಷ (29), ಎಲ್ಐಸಿ ಏಜೆಂಟ್, ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ವಿಷ್ಣುಕಾಂತ ರಾವಳ (ಹುಡೆ, ಹಾನಗಲ್) ಮತ್ತು ಬಳ್ಳಾರಿ ನಾಗ (ನಾಗೇಹಳ್ಳಿ, ಶಿಕಾರಿಪೂರ) ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ದೂರಿನ ಪ್ರಕಾರ, 2025ರ ಮಾರ್ಚ್ 1ರಂದು ರಾತ್ರಿ 10ರಿಂದ 11 ಗಂಟೆಯ ನಡುವೆ ಮುಂಡಗೋಡ ತಾಲೂಕಿನ ಮರಗಡಿ ಗ್ರಾಮದಲ್ಲಿ ಆರೋಪಿಗಳು ಬಂಗಾರದ ಆಭರಣಗಳನ್ನು ಮಾರಾಟ ಮಾಡುವುದಾಗಿ ನಂಬಿಕೆ ಮೂಡಿಸಿ, ಸಂತೋಷರಿಂದ 5,76,000 ರೂ ಹಣ ಪಡೆದಿದ್ದಾರೆ. ಬಳಿಕ ನಕಲಿ ಬಂಗಾರದ ಆಭರಣಗಳನ್ನು ನೀಡಿ ಹಣ ಪಡೆದುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.