ಗೋಕರ್ಣ: ಮನೆಯ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಅಂತರ್ರಾಜ್ಯ ಮನೆಗಳ್ಳರಿಬ್ಬರನ್ನು ಗೋಕರ್ಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಮನೆಯೊಂದರ ಬೀಗ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಒಟ್ಟು 66 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.ಮೇಲಾಧಿಕಾರಿಗಳ ಆದೇಶದಂತೆ ರಚಿಸಲಾದ ವಿಶೇಷ ಪತ್ತೆ ತಂಡವು ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಆರೋಪಿತರನ್ನು ಪತ್ತೆಹಚ್ಚಿ, ಕೇರಳ ರಾಜ್ಯದ ತ್ರಿಶೂರ್ನಲ್ಲಿ ಬಂಧಿಸಿದೆ.
ಬಂಧಿತರನ್ನು ಸತ್ತೇಶ್ ಕೆ.ಪಿ ಮತ್ತು ಶಿಜು ಎಂ.ಆರ್ ) ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು ಸುಮಾರು 17 ಲಕ್ಷ ರೂಪಾಯಿ ಮೌಲ್ಯದ 66 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಕಳ್ಳತನಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರನ್ನು ಜಪ್ತಿ ಮಾಡಲಾಗಿದೆ.
ತನಿಖೆಯಲ್ಲಿ ಆರೋಪಿಗಳು ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಈ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಡಿ.ಎಸ್.ಪಿ ಗಿರೀಶ್ ಬಿ.ವೈ. ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಕುಮಟಾ ಪಿ.ಐ ಯೋಗೇಶ್ ಕೆ.ಎಂ., ಗೋಕರ್ಣ ಪಿ.ಐ ಶ್ರೀಧರ ಎಸ್.ಆರ್ ನೇತೃತ್ವದಲ್ಲಿ ಪಿ.ಎಸ್.ಐ ಅನಿಲ್ ಬಿ.ಎಂ. ಸೇರಿದಂತೆ ಪೊಲೀಸ್ ಸಿಬ್ಬಂದಿಗಳಾದ ರಾಜೇಶ್ ಹೆಚ್ ನಾಯ್ಕ, ಶ್ರೀಕಾಂತ್ ಕಟಬರ್, ಪರಮೇಶ್ವರ ಬೆಂಡಿಗಟ್ಟಿ, ಕಿರಣ್ ಬಾಳೂರ್, ಮಹಮ್ಮದ್ ಶಫಿ ಶೇಖ್, ಯೋಗೇಶ್ ಕುಮಾರ್ ಹಾಗೂ ತಾಂತ್ರಿಕ ವಿಭಾಗದ ಉದಯ ಗುನಗಾ, ಬಬನ್ ಕದಂ, ಮಹಾಲಿಂಗ ಸಾವಳಗಿ ಅವರು ಭಾಗವಹಿಸಿದ್ದರು.
ಆರೋಪಿಗಳ ಪತ್ತೆ ಮತ್ತು ಬಂಧನ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.