ಯಲ್ಲಾಪುರ: ಅಂಗಾರಕ ಸಂಕಷ್ಟಹರ ಚತುರ್ಥಿಯ ಭಕ್ತಿಭಾವದ ಮಧ್ಯೆ ತಾಲೂಕಿನ ಕಳಚೆ ಗ್ರಾಮದಲ್ಲಿ ಪ್ರಕೃತಿಯಲ್ಲಿ ಅಪರೂಪದ ವೈಚಿತ್ರ್ಯ ಕಂಡುಬಂದಿದೆ.
ಒಂದೇ ದಾಸವಾಳ ಹೂವಿನ ತೊಟ್ಟಿನಲ್ಲಿ ಐದು ಹೂಗಳು ಅರಳಿರುವ ಅಚ್ಚರಿ ದೃಶ್ಯ ಭಕ್ತರಲ್ಲಿ ಕುತೂಹಲ ಹುಟ್ಟಿಸಿದೆ.ಕಳಚೆ ಗ್ರಾಮದ ಪ್ರಮೋದ ಹೆಬ್ಬಾರ್ ಅವರ ಮನೆಯಲ್ಲಿ ಮಂಗಳವಾರ ಬೆಳಿಗ್ಗೆ ದೇವರ ಪೂಜೆಗೆ ಎಂದಿನಂತೆ ಹೂವುಗಳನ್ನು ಕೊಯ್ಯಲಾಗಿತ್ತು.
ಈ ವೇಳೆ ಕೊಯ್ಯಲಾದ ಹೂವಿನ ರಾಶಿಯಲ್ಲಿ ಒಂದು ದಾಸವಾಳ ಹೂವಿನಲ್ಲಿ ಈ ಬೆಳವಣಿಗೆ ಕಂಡುಬಂದಿದ್ದು, ಒಂದೇ ತೊಟ್ಟಿನಲ್ಲಿ ಐದು ಹೂಗಳು ಅರಳಿರುವುದು ಗಮನ ಸೆಳೆದಿತು.ಪೂಜೆ ವೇಳೆ ದೇವರಿಗೆ ಸಮರ್ಪಿಸುವಾಗ ಈ ಅಚ್ಚರಿ ಗೋಚರವಾಗಿದ್ದು, ಪ್ರಕೃತಿಯ ಈ ಅಪರೂಪದ ಕ್ಷಣವನ್ನು ಪ್ರಮೋದ ಹೆಬ್ಬಾರ್ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಸಾಮಾನ್ಯವಾಗಿ ಒಂದು ತೊಟ್ಟಿನಲ್ಲಿ ಒಂದು, ಅಪರೂಪಕ್ಕೆ ಎರಡು ಹೂ ಅರಳುತ್ತದೆ. ಆದರೆ, ಈ ಪಂಚಮುಖಿ ಸ್ಥಳೀಯರಲ್ಲಿ ಆಶ್ಚರ್ಯ ಮತ್ತು ಕುತೂಹಲ ಮೂಡಿಸಿದೆ. ಭಕ್ತಿಪೂರ್ಣ ದಿನದಂದು ಕಂಡ ಈ ವೈಚಿತ್ರ್ಯವನ್ನು ಹಲವರು ವಿಶೇಷ ಸಂಕೇತವೆಂದು ಭಾವಿಸುತ್ತಿದ್ದಾರೆ.