ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಸ್ಟೀಲ್, ಗ್ಲಾಸ್, ಪ್ಲಾಸ್ಟಿಕ್ ಪ್ಲೇಟ್ಗಳ ನಡುವೆ ನಾವು ನಿಧಾನವಾಗಿ ಕಳೆದುಕೊಳ್ಳುತ್ತಿರುವ ಒಂದು ಅಮೂಲ್ಯ ಸಂಪ್ರದಾಯ ಬಾಳೆ ಎಲೆಯಲ್ಲಿ ಊಟ ಮಾಡುವುದು. ಒಂದು ಕಾಲದಲ್ಲಿ ಇದು ಕೇವಲ ಹಬ್ಬ-ಹರಿದಿನಗಳ ಭಾಗವಷ್ಟೇ ಅಲ್ಲ, ದಿನನಿತ್ಯದ ಜೀವನದ ಸಹಜ ಭಾಗವಾಗಿತ್ತು.
ಗ್ರಾಮೀಣ ಪ್ರದೇಶಗಳಲ್ಲಿ ಬೆಳಗಿನ ತಿಂಡಿಯಿಂದ ರಾತ್ರಿ ಊಟದವರೆಗೆ ಬಾಳೆ ಎಲೆಗಳೇ ತಟ್ಟೆಯಾಗಿದ್ದವು. ಮನೆ ಆವರಣದಲ್ಲೇ ಬೆಳೆಯುವ ಬಾಳೆ ಗಿಡದಿಂದ ಎಲೆ ಕತ್ತರಿಸಿ, ನೀರಿನಲ್ಲಿ ತೊಳೆದು, ಅದರಲ್ಲಿ ಊಟ ಮಾಡುವ ಪದ್ಧತಿ ಆರೋಗ್ಯಕರವಾಗಿಯೂ, ಪರಿಸರ ಸ್ನೇಹಿಯಾಗಿಯೂ ಇತ್ತು.
ಆದರೆ ಇಂದು ಸುಲಭತೆ ಮತ್ತು ವೇಗದ ಹೆಸರಿನಲ್ಲಿ ನಾವು ನೈಸರ್ಗಿಕ ಪದ್ಧತಿಗಳನ್ನು ಮರೆತು, ಕೃತಕ ವಸ್ತುಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದೇವೆ. ಇದರಿಂದ ನಮ್ಮ ಆರೋಗ್ಯಕ್ಕೂ, ಪರಿಸರಕ್ಕೂ ಹಾನಿಯ ಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ, ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿಯ ಮಹತ್ವವನ್ನು ಪುನಃ ಅರಿಯುವುದು ಅವಶ್ಯಕ.
ಇದರ ಹಿಂದೆ ಸ್ಪಷ್ಟವಾದ ವೈಜ್ಞಾನಿಕ ಕಾರಣಗಳೂ ಇವೆ. ಬಾಳೆ ಎಲೆಯಲ್ಲಿ ಪಾಲಿಫಿನಾಲ್ಸ್ (polyphenols) ಎಂಬ ಆಂಟಿಆಕ್ಸಿಡೆಂಟ್ಗಳು ಇರುತ್ತವೆ. ಬಿಸಿ ಆಹಾರವನ್ನು ಎಲೆಯ ಮೇಲೆ ಇಡುತ್ತಿದ್ದಂತೆ, ಈ ಸಂಯುಕ್ತಗಳು ಸ್ವಲ್ಪ ಮಟ್ಟಿಗೆ ಆಹಾರಕ್ಕೆ ಮಿಶ್ರಣವಾಗುತ್ತವೆ. ಈ ಆಂಟಿಆಕ್ಸಿಡೆಂಟ್ಗಳು ದೇಹದ ಕೋಶಗಳನ್ನು ಹಾನಿಯಿಂದ ರಕ್ಷಿಸಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.
ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂಬುದು ಹಿರಿಯರ ಅನುಭವದ ಮಾತು ಮಾತ್ರವಲ್ಲ, ಅದರ ಹಿಂದೆ ವೈಜ್ಞಾನಿಕ ಅಂಶವೂ ಇದೆ. ಎಲೆಯ ಮೇಲ್ಮೈ ಮೃದುವಾಗಿದ್ದು, ಧೂಳು ಅಥವಾ ಜೀವಾಣುಗಳು ಅಂಟಿಕೊಳ್ಳುವ ಸಾಧ್ಯತೆ ಕಡಿಮೆ. ಯಾವುದೇ ರಾಸಾಯನಿಕ ಲೇಪನ ಇಲ್ಲದ ಕಾರಣ ಇದು ಸಂಪೂರ್ಣ ಸುರಕ್ಷಿತ. ಬಿಸಿ ಅನ್ನ, ಸಾರು, ಪಲ್ಯ ಇತ್ಯಾದಿಗಳು ಎಲೆಯ ಮೇಲೆ ಇಡುತ್ತಿದ್ದಂತೆ ಅದರ ಸ್ವಲ್ಪ ಸುಗಂಧವೂ ಆಹಾರಕ್ಕೆ ಸೇರಿ ರುಚಿಯೂ ಹೆಚ್ಚುತ್ತದೆ.
ಇದಕ್ಕೆ ವಿರುದ್ಧವಾಗಿ, ಪ್ಲಾಸ್ಟಿಕ್ ಅಥವಾ ಕಡಿಮೆ ಗುಣಮಟ್ಟದ ಬಳಸಿ ಎಸೆಯುವ ಪ್ಲೇಟ್ಗಳಲ್ಲಿ ಬಿಸಿ ಆಹಾರ ಹಾಕಿದಾಗ ರಾಸಾಯನಿಕಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಇವು ದೀರ್ಘಕಾಲದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದರೆ ಬಾಳೆ ಎಲೆ ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, ಯಾವುದೇ ವಿಷಕಾರಿ ಅಂಶಗಳನ್ನು ಬಿಡುಗಡೆ ಮಾಡುವುದಿಲ್ಲ. ಹೀಗಾಗಿ ಇದು ಅತ್ಯಂತ ಸುರಕ್ಷಿತವಾದ ಆಯ್ಕೆ.
ಪರಿಸರದ ದೃಷ್ಟಿಯಿಂದ ನೋಡಿದರೆ, ಬಾಳೆ ಎಲೆ ಅತ್ಯುತ್ತಮ ಪರ್ಯಾಯ. ಪ್ಲಾಸ್ಟಿಕ್ ತ್ಯಾಜ್ಯ ಇಂದಿನ ಜಗತ್ತಿನ ದೊಡ್ಡ ಸಮಸ್ಯೆಯಾಗಿರುವಾಗ, ಬಾಳೆ ಎಲೆ ಸಂಪೂರ್ಣವಾಗಿ ಜೈವಿಕವಾಗಿ ಕೊಳೆಯುತ್ತದೆ. ಬಳಸಿದ ನಂತರ ಅದನ್ನು ತ್ಯಜಿಸಿದರೆ ಅದು ಮಣ್ಣಿನಲ್ಲಿ ಬೆರೆತುಹೋಗುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ಮರುಬಳಕೆ, ತೊಳೆಯುವ ನೀರಿನ ವ್ಯಯ ಇವುಗಳ ಅಗತ್ಯವೂ ಇಲ್ಲ.
ಇದಲ್ಲದೆ, ಬಾಳೆ ಎಲೆಯಲ್ಲಿ ಊಟ ಮಾಡುವುದಕ್ಕೆ ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕ ಅಂಶವೂ ಇದೆ. ಹಬ್ಬ-ಹರಿದಿನಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಹಾರದ ಮೇಲೆ ಗೌರವ, ಶಿಸ್ತು ಹಾಗೂ ಒಗ್ಗಟ್ಟಿನ ಭಾವನೆ ಮೂಡುತ್ತದೆ. ನೆಲದ ಮೇಲೆ ಕೂತು ಊಟ ಮಾಡುವ ಪದ್ಧತಿ ದೇಹಕ್ಕೆ ಸಹ ಅನುಕೂಲಕರವಾಗಿದ್ದು, ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಇದು ಕೇವಲ ಆಹಾರ ಸೇವನೆ ಅಲ್ಲ, ಒಂದು ಅನುಭವ.
ಒಟ್ಟಿನಲ್ಲಿ, ಬಾಳೆ ಎಲೆಯಲ್ಲಿ ಊಟ ಮಾಡುವುದು ಹಳೆಯ ಪದ್ಧತಿ ಎಂದು ಕಡೆಗಣಿಸುವ ವಿಷಯವಲ್ಲ. ಇದು ಆರೋಗ್ಯ, ಪರಿಸರ ಮತ್ತು ಸಂಸ್ಕೃತಿ ಈ ಮೂರನ್ನೂ ಒಂದೇ ಸಮಯದಲ್ಲಿ ಕಾಪಾಡುವ ಅತ್ಯುತ್ತಮ ಜೀವನ ಶೈಲಿ. ಆಧುನಿಕತೆ ಎಷ್ಟೇ ಮುಂದುವರೆದರೂ, ಇಂತಹ ನೈಸರ್ಗಿಕ ಮತ್ತು ವೈಜ್ಞಾನಿಕ ಪದ್ಧತಿಗಳನ್ನು ನಾವು ಮರೆಯಬಾರದು. ಮತ್ತೆ ಒಮ್ಮೆ ಬಾಳೆ ಎಲೆಯಲ್ಲಿ ಊಟ ಮಾಡುವ ಅಭ್ಯಾಸವನ್ನು ಅಳವಡಿಸಿಕೊಂಡರೆ, ಅದು ನಮ್ಮ ದೇಹಕ್ಕೂ, ಪ್ರಕೃತಿಗೂ ಸುರಕ್ಷಿತ. ನಿತ್ಯ ಅಸಾಧ್ಯವಾದರೂ ವಾರಕ್ಕೆ ಒಂದೆರಡು ಬಾರಿಯಾದರೂ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿ ರೂಢಿಸಿಕೊಳ್ಳೋಣ.
– ಪ್ರಜ್ಞಾ ಹೆಗಡೆ.