ಯಲ್ಲಾಪುರ: ತಾಲೂಕಿನ ಅರಬೈಲ ಸಮೀಪ ಮಿನಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯರು ಹಾಗೂ ಮಕ್ಕಳೂ ಸೇರಿ 18 ಮಂದಿ ಗಾಯಗೊಂಡ ಘಟನೆ ಮೇ 10ರಂದು ನಡೆದಿತ್ತು. ಈ ಅಪಘಾತಕ್ಕೆ ಮಿನಿ ಬಸ್ ಚಾಲಕನ ನಿರ್ಲಕ್ಷ್ಯದ ಹಾಗೂ ಅತಿವೇಗದ ಚಾಲನೆಯೇ ಕಾರಣ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅರಬೈಲ ನಿವಾಸಿ ಕೃಷ್ಣ ನಾರಾಯಣ ನಾಯ್ಕ ಅವರು ನೀಡಿದ ದೂರಿನ ಪ್ರಕಾರ, ಮೇ 10ರಂದು ಸಂಜೆ ಸುಮಾರು 6.20ರ ವೇಳೆಗೆ ಸಂದೀಪ ತಳೇಕರ ಎಂಬಾತ ಚಾಲನೆ ಮಾಡುತ್ತಿದ್ದ ಮಿನಿ ಬಸ್ (ಕೆಎ-31/7734) ಯಲ್ಲಾಪುರ ಕಡೆಯಿಂದ ಅರಬೈಲ ಕಡೆಗೆ ತೆರಳುತ್ತಿತ್ತು. ಶಿರ್ಲೆ ಫಾಲ್ಸ್ ರಸ್ತೆ ದಾಟಿದ ಬಳಿಕ ಸುಮಾರು 500 ಮೀಟರ್ ಮುಂದೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಪರಮಾನದ ನಾಯ್ಕ ಅವರ ಪತ್ನಿ ಸುಷ್ಮಾ ನಾಯ್ಕ ಹಾಗೂ ರೇಷ್ಮಾ ರಾಜೇಶ ನಾಯ್ಕ ಅವರ ಹಲ್ಲುಗಳು ಮುರಿದಿದ್ದು, ಹಲವರಿಗೆ ಕೈ, ಕಾಲು ಹಾಗೂ ಸೊಂಟ ಭಾಗಗಳಿಗೆ ಒಳನೋವು ಉಂಟಾಗಿದೆ. ನೇಹಾಲ ಹಾಗೂ ಅಖಿಲ ಎಂಬವರಿಗೆ ಕೈ ಎಲುಬು ಮುರಿತವಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪುನೀತ, ಸಮರ್ಥ, ಕರ್ಣ ಸೇರಿದಂತೆ ಕೆಲವು ಮಕ್ಕಳಿಗೆ ತಲೆ ಭಾಗಕ್ಕೆ ಗಾಯಗಳಾಗಿದ್ದು, ಹಲವು ಮಹಿಳೆಯರು ಹಾಗೂ ಪ್ರಯಾಣಿಕರು ಮೈಕೈ ನೋವಿನಿಂದ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.
ಬಸ್ ಚಾಲಕ, ತೇಲಂಗಾರ ಬಾಸಲದ ಸಂದೀಪ ತಳೇಕರ ಈತ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.