ಯಲ್ಲಾಪುರ ಎಲ್ಎಸ್ಎಂಪಿ ಸೊಸೈಟಿ ವಜ್ರಮಹೋತ್ಸವದಲ್ಲಿ ಎಂಎಲ್ಸಿ ಶಾಂತಾರಾಮಸಿದ್ದಿ
ಯಲ್ಲಾಪುರ: ಸದಾ ರೈತರ ಹಿತ ಕಾಯುತ್ತ ಬಂದಿರುವ ಸಹಕಾರ ಸಂಘಗಳನ್ನು ಉಳಿಸಿ, ಬೆಳೆಸಬೇಕಾದದ್ದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ ಎಂದು ಎಂಎಲ್ಸಿ ಶಾಂತಾರಾಮ ಸಿದ್ದಿ ಹೇಳಿದರು.
ಪಟ್ಟಣದ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ (ಎಲ್ಎಸ್ಎಂಪಿ)ದ ವಜ್ರಮಹೋತ್ಸವ ಹಾಗೂ ನೂತನ ಸಭಾಭವನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಲೆನಾಡು ಭಾಗದಲ್ಲಿ ಸಹಕಾರ ಸಂಘಗಳು ರೈತರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತ ಬಂದಿವೆ. ರಾಜಕೀಯ ಹಸ್ತಕ್ಷೇಪದ ಕೆಸರೆರಚಾಟದಿಂದ ಸಹಕಾರ ಸಂಘಗಳು ಮುಕ್ತವಾದಾಗ ಮಾತ್ರ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಜಿಲ್ಲೆಯ ಸಹಕಾರ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಕದಡುತ್ತಿದೆ. ಸಂಘಗಳ ಹಣ ಅನಗತ್ಯವಾಗಿ ಕೋರ್ಟ್-ಕಚೇರಿ ವ್ಯವಹಾರಗಳಿಗೆ ವ್ಯಯವಾಗುತ್ತಿರುವುದು ವಿಷಾದದ ಸಂಗತಿ. ತಮ್ಮ ತಮ್ಮ ಹಮ್ಮು-ಬಿಮ್ಮುಗಳನ್ನು ಬದಿಗಿಟ್ಟು ರೈತರ ಅನುಕೂಲದ ದೃಷ್ಟಿಯಿಂದ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಎಲ್ಎಸ್ಎಂಪಿ ಸೊಸೈಟಿ ಹಿರಿಯ ಸಹಕಾರಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತ ಗಮನಾರ್ಹ ಸಾಧನೆ ಮಾಡುತ್ತಿದೆ. ರೈತರ ಅಗತ್ಯಗಳಿಗೆ ನಿರಂತರ ನೆರವಾಗುತ್ತಿದೆ. ರೈತರು ಸಹಕಾರ ಸಂಘಗಳ ಮೂಲಕವೇ ತಮ್ಮ ಮಹಸೂಲನ್ನು ಮಾರಾಟ ಮಾಡಬೇಕು. ಅಲ್ಲದೆ, ಸಹಕಾರ ಸಂಘಗಳಲ್ಲಿ ಆರೋಗ್ಯಪೂರ್ಣ ಸ್ಪರ್ಧೆ ಇರಬೇಕು ಎಂದರು.
ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಅಧ್ಯಕ್ಷತೆ ವಹಿಸಿದ್ದರು. ಪ್ರಿಯಾ ಎಂ.ಭಟ್ಟ ಪ್ರಾರ್ಥಿಸಿದರು. ಉಪಾಧ್ಯಕ್ಷ ಟಿ.ಆರ್. ಹೆಗಡೆ ಸ್ವಾಗತಿಸಿದರು. ನಿರ್ದೇಶಕ ನರಸಿಂಹ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಹೆಗಡೆ ಸೇರಿದಂತೆ ಪ್ರಮುಖರಾದ ಪ್ರಮೋದ ಹೆಗಡೆ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಕೃಷ್ಣ ಹೆಗಡೆ ಜೂಜಿನಬೈಲು, ಉಮೇಶ ಭಾಗ್ವತ, ಸಂತೋಷ ಭಟ್ಟ, ಆರ್.ಎಸ್. ಭಟ್ಟ, ಪ್ರಭಾ ಪ್ರಕಾಶ ಭಾಗ್ವತ, ಶ್ಯಾಮಲಾ ಹೆಗಡೆ, ಅಪ್ಪು ಆಚಾರಿ, ಉದ್ಯಮಿ ಬಾಲಕೃಷ್ಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.