Saturday, May 30, 2026
HomeLocal Newsಮನೆಯಲ್ಲಿರುವ ಗ್ರಂಥಾಲಯಗಳು ಜ್ಞಾನದ ಸಂಕೇತ

ಮನೆಯಲ್ಲಿರುವ ಗ್ರಂಥಾಲಯಗಳು ಜ್ಞಾನದ ಸಂಕೇತ

ಕಾರವಾರ: ಮನೆಗಳಲ್ಲಿ ಸ್ಥಾಪಿಸಿರುವ ಪುಸ್ತಕಗಳ ಗ್ರಂಥಾಲಯಗಳು ಕೇವಲ ಪುಸ್ತಕದ ಕಟ್ಟುಗಳಲ್ಲ, ಅವುಗಳು ಆ ಮನೆಯ ನಿವಾಸಿಗಳ ಜ್ಞಾನದ, ಸ್ವಾಭಿಮಾನದ ಮತ್ತು ಅರಿವಿನ ಸಂಕೇತ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಹೇಳಿದರು.

ಅವರು ಮಂಗಳವಾರ ಕಾರವಾರದ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗ್ರತಿ ಸಮಿತಿ ವತಿಯಿಂದ ಆಯೋಜಿಸಲಾದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವು ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ರಾಜ್ಯದಲ್ಲಿ 1 ಲಕ್ಷ ಮನೆಗಳಲ್ಲಿ ಗ್ರಂಥಾಲಯಗಳನ್ನು ತೆರೆಯುವ ಗುರಿ ಹೊಂದಲಾಗಿದೆ.

ಪ್ರತೀ ಮನೆಯಲ್ಲಿ ಭಕ್ತಿಯ ಸಂಕೇತವಾಗಿ ಪೂಜಾ ಕೋಣೆ ಇರುವಂತೆ ಜ್ಞಾನದ ಸಂಕೇತವಾಗಿ ಪುಸ್ತಕ ಗ್ರಂಥಾಲಯಗಳು ಇರಬೇಕು. ಪುಸ್ತಕಗಳನ್ನು ಓದುವುದು ಧ್ಯಾನಕ್ಕೆ ಸಮನಾಗಿದ್ದು, ದೈನಂದಿನ ಒತ್ತಡಗಳಿಂದ ಮುಕ್ತಿ ದೊರೆಯಲಿದೆ ಎಂದರು.

ರಾಜ್ಯದಲ್ಲಿ ಮನೆಗಳಲ್ಲಿ ಸ್ಥಾಪನೆಯಾಗುವ ಗ್ರಂಥಾಲಯಗಳ ಬೆಳವಣಿಗೆಗೆ ಮತ್ತು ಅದರ ವಾರಸುದಾರರನ್ನು ಗೌರವಿಸುವ ಮತ್ತು ಉತ್ತೇಜಿಸುವ ಸಲುವಾಗಿ ಪ್ರಾಧಿಕಾರದಿಂದ ರಾಜ್ಯದ 4 ಕಂದಾಯ ವಿಭಾಗಗಲ್ಲಿ ವಾರ್ಷಿಕ ಪ್ರಶಸ್ತಿ ಮತ್ತು ರೂ.25000 ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಮನೆಗಳಲ್ಲಿಯೂ ಮನೆಗೊಂದು ಗ್ರಂಥಾಲಯ ತೆರೆಯುವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯಕ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಾನಾಯ್ಕ, ಮನೆಗೊಂದು ಗ್ರಂಥಾಲಯದ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕೃಷ್ಣಾ ನಾಯಕ ಹಿಚ್ಕಡ, ಯಮುನಾ ಗಾಂವಕರ, ಶ್ರೀದೇವಿ ಕೆರೆಮೆನ, ಎನ್.ಜಿ. ನಾಯಕ ಮತ್ತಿತರರು ಇದ್ದರು.

ಮನೆಗೊಂದು ಗ್ರಂಥಾಲಯ ಅನುಷ್ಠಾನದಡಿ ಕಾರವಾರದಲ್ಲಿ ಪ್ರೀತಿಪದ ಪುಸ್ತಕ ಮನೆ, ಸುಪ್ತಶ್ರೀ ಪುಸ್ತಕ ಮನೆ, ಹರ್ಷಗಿರಿ ಪುಸ್ತಕ ಮನೆಗಳಿಗೆ ಡಾ.ಮಾನಸ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share