ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದಲ್ಲಿ ಲಾರಿ ಪಲ್ಟಿಯಾದ ಪರಿಣಾಮ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಜಾವೇದ್ ಕಮರುದ್ದೀನ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇವರು ಹರಿಯಾಣ ರಾಜ್ಯದ ಪಲ್ವಲ್ ಜಿಲ್ಲೆಯ ನಿವಾಸಿಯಾಗಿದ್ದು, ಲಾರಿ ಮಾಲೀಕರಾಗಿದ್ದರು ಎಂದು ತಿಳಿದುಬಂದಿದೆ.
ದೆಹಲಿಯಿಂದ ಕಬ್ಬಿಣದ ಪೈಪ್ಗಳನ್ನು ತುಂಬಿಕೊಂಡು ಕೇರಳದ ತಿರುವನಂತಪುರಕ್ಕೆ ತೆರಳುತ್ತಿದ್ದ ಲಾರಿ ಅರಬೈಲ್ ಘಟ್ಟದ ಬಳಿ ಅಪಘಾತಕ್ಕೀಡಾಗಿದೆ. ಎದುರಿನಿಂದ ಬಂದ ವಾಹನವನ್ನು ತಪ್ಪಿಸಲು ಚಾಲಕ ನಜೀರ್ ಮಹಾಜುದ್ದೀನ್ ಲಾರಿಯನ್ನು ಎಡಬದಿಗೆ ತಿರುಗಿಸಿದ್ದು, ಈ ವೇಳೆ ಲಾರಿ ನಿಯಂತ್ರಣ ತಪ್ಪಿ ಘಟ್ಟದಲ್ಲಿ ಪಲ್ಟಿಯಾಗಿದೆ ಎನ್ನಲಾಗಿದೆ.
ಅಪಘಾತ ಸಂಭವಿಸುವ ವೇಳೆ ಲಾರಿಯಲ್ಲಿದ್ದ ಜಾವೇದ್ ಕಮರುದ್ದೀನ್ ವಾಹನದಿಂದ ಜಿಗಿದಿದ್ದು, ಅವರ ಮೇಲೆಯೇ ಲಾರಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.