ಶಿರಸಿ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRDCL) ಕಚೇರಿಯ ಎಫ್ಡಿಸಿ ನೌಕರನಿಗೆ ಗುತ್ತಿಗೆದಾರನೊಬ್ಬ ಜೀವ ಬೆದರಿಕೆ ಹಾಕಿದ ಆರೋಪದಡಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಗಿ ನಿವಾಸಿ ಪುನೀತ್ ಮಂಜುನಾಥ ಭರತನಹಳ್ಳಿ (38) ನೀಡಿದ ದೂರಿನ ಮೇರೆಗೆ ಸಂಗಮೇಶ್ವರ ಮಹಾಬಲೇಶ್ವರ ಕಟ್ಟಿ ಹಾಗೂ ಇನ್ನು ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂಗಮೇಶ್ವರ ಕಟ್ಟಿಗೆ ವಿವಿಧ ಜಿಲ್ಲೆಗಳ ಬಿಸಿಎಂ ಹಾಸ್ಟೆಲ್ಗಳ ದುರಸ್ತಿ ಹಾಗೂ ನವೀಕರಣ ಕಾಮಗಾರಿಗಳ ಗುತ್ತಿಗೆ ನೀಡಲಾಗಿತ್ತು. ಬಳಿಕ ಮೇ 1ರಿಂದ ಆರೋಪಿತನು ಕಚೇರಿ ಹಾಗೂ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ, ಬಿಲ್ಗಳನ್ನು ಒದಗಿಸದಿದ್ದರೆ ಬ್ಲ್ಯಾಕ್ಮೇಲ್ ಮಾಡುವುದಾಗಿ ಹಾಗೂ ಜೀವ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.
ಮೇ 18ರಂದು ಮಧ್ಯಾಹ್ನ ಕಚೇರಿಯಲ್ಲಿ ದೂರುದಾರರು ಇಲ್ಲದ ವೇಳೆ ಆರೋಪಿತನು ಇನ್ನೂ ಮೂವರೊಂದಿಗೆ ಬಂದು ಕಚೇರಿಯಲ್ಲಿ ಅಸಭ್ಯ ವರ್ತನೆ ತೋರಿದ್ದು, ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಹೋದ್ಯೋಗಿಗಳು ಮಾಹಿತಿ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.