ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗ್ರಾಮೀಣ ಭಾಗವೊಂದರಲ್ಲಿ ನಡೆದಿರುವ ಘಟನೆಯಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ.
ತನ್ನದೇ 13 ವರ್ಷದ ಅಪ್ರಾಪ್ತ ಮಗಳ ಮೇಲೆ ತಂದೆಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಅಂಕೋಲಾ ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿಯ ಪ್ರಕಾರ, ಪಟ್ಟಣ ಸಮೀಪದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ವಾಸಿಸುತ್ತಿದ್ದ ಸುಮಾರು 45 ವರ್ಷದ ವ್ಯಕ್ತಿ ಮದ್ಯದ ಅಮಲಿನಲ್ಲಿ ತನ್ನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಭಯಗೊಂಡ ಬಾಲಕಿ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಮಾಹಿತಿ ದೊರಕುತ್ತಿದ್ದಂತೆಯೇ ಅಂಕೋಲಾ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಇತ್ತೀಚಿನ ವರ್ಷಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಬಾಲ್ಯ ಗರ್ಭಧಾರಣೆ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ.
ಶಾಲೆಗೆ ಹೋಗಿ ಆಟವಾಡುತ್ತ, ಕನಸು ಕಾಣಬೇಕಿದ್ದ ಮಕ್ಕಳು, ಬದುಕಿನ ಅತ್ಯಂತ ಕತ್ತಲೆಯ ಅನುಭವಗಳನ್ನು ಎದುರಿಸುತ್ತಿರುವುದು ಸಮಾಜದ ನೈತಿಕ ಕುಸಿತದ ಲಕ್ಷಣ. 2025ರ ಆರಂಭದಿಂದಲೇ ದೇಶಾದ್ಯಂತ ಬಾಲ್ಯ ಗರ್ಭಧಾರಣೆ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. 10ರಿಂದ 19 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಮಕ್ಕಳ ಹಕ್ಕುಗಳ ಹೋರಾಟಗಾರರು, ವೈದ್ಯರು ಹಾಗೂ ಸಮಾಜ ಸೇವಾ ಸಂಘಟನೆಗಳಲ್ಲಿ ಹೊಸ ಆತಂಕ ಸೃಷ್ಟಿಸಿವೆ.
ನಮ್ಮದೇ ರಾಜ್ಯ ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಅಧಿಕೃತ ಅಂಕಿಅಂಶಗಳಿಗಿಂತ ಮೌನವಾಗಿ ಮುಚ್ಚಿಹೋಗಿರುವ ಪ್ರಕರಣಗಳ ಸಂಖ್ಯೆಯೇ ಹೆಚ್ಚಿರಬಹುದು ಎಂಬ ಅನುಮಾನ ತಜ್ಞರಲ್ಲಿದೆ.
ಕರ್ನಾಟಕದಲ್ಲಿ 2024-25ರ ಅವಧಿಯಲ್ಲಿ ಸಾವಿರಾರು ಪೋಕ್ಸೊ ಪ್ರಕರಣಗಳು ದಾಖಲಾಗಿದ್ದು, ನೂರಾರು ಬಾಲಕಿಯರು ಗರ್ಭಿಣಿಯಾಗಿರುವುದು ದಾಖಲೆಗಳಲ್ಲೇ ಗೋಚರಿಸಿದೆ. ಉತ್ತರ ಕನ್ನಡದಂತಹ ಸಾಂಸ್ಕೃತಿಕವಾಗಿ ಪ್ರಬುದ್ಧ ಜಿಲ್ಲೆಗಳಲ್ಲಿಯೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಕೇಂದ್ರದಲ್ಲೇ ಪ್ರಸವಿಸಿದ ಘಟನೆಗಳು ನಡೆದಿವೆ.
ಇದು ಕೇವಲ ಕುಟುಂಬದ ಸಮಸ್ಯೆಯಲ್ಲ, ಸಮಗ್ರ ಸಮಾಜದ ವೈಫಲ್ಯ.ಇಂತಹ ಘಟನೆಗಳಿಗೆ ಪ್ರಮುಖ ಕಾರಣಗಳಲ್ಲಿ ಕುಟುಂಬದೊಳಗಿನ ಮೌನ, ಬಾಲ್ಯ ವಿವಾಹ, ಲೈಂಗಿಕ ಶಿಕ್ಷಣದ ಕೊರತೆ, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗ, ಮಕ್ಕಳ ಮೇಲಿನ ಮೇಲ್ವಿಚಾರಣೆಯ ಅಭಾವ, ಮದ್ಯ ಮತ್ತು ಮಾದಕ ವ್ಯಸನಗಳ ಹೆಚ್ಚಳ ಮುಂತಾದವು ಪ್ರಮುಖವಾಗಿವೆ.
ಇನ್ನೂ ಅನೇಕ ಮನೆಗಳಲ್ಲಿ ಲೈಂಗಿಕ ಶಿಕ್ಷಣ ಎಂಬ ವಿಷಯವೇ ನಾಚಿಕೆಯ ವಿಷಯವಾಗಿ ಕಾಣಲಾಗುತ್ತದೆ. ಇದರ ಪರಿಣಾಮವಾಗಿ ಮಕ್ಕಳಿಗೆ ‘ಒಳ್ಳೇ ಸ್ಪರ್ಶ’, ‘ಕೆಟ್ಟ ಸ್ಪರ್ಶ’ ಎಂಬ ಅರಿವು ಕೂಡ ಸರಿಯಾಗಿ ಮೂಡುತ್ತಿಲ್ಲ.
ಅತ್ಯಂತ ಕಳವಳಕಾರಿ ಸಂಗತಿ ಏನೆಂದರೆ, ಅಪ್ರಾಪ್ತರ ಮೇಲಿನ ಅನೇಕ ದೌರ್ಜನ್ಯಗಳು ಮನೆಯೊಳಗೇ ನಡೆಯುತ್ತಿವೆ. ಪರಿಚಿತರು, ಸಂಬಂಧಿಕರು ಅಥವಾ ಕುಟುಂಬದವರೇ ಆರೋಪಿಗಳಾಗಿರುವ ಪ್ರಕರಣಗಳು ಹೆಚ್ಚುತ್ತಿರುವುದು ಸಮಾಜದ ಭದ್ರತೆಯ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಿದೆ. ಹಲವಾರು ಬಾರಿ ಕುಟುಂಬದ ಮಾನ, ಭಯ ಅಥವಾ ಸಾಮಾಜಿಕ ಒತ್ತಡದ ಕಾರಣದಿಂದ ಪ್ರಕರಣಗಳು ಹೊರಬರುವುದೇ ಇಲ್ಲ.
ಮಕ್ಕಳ ಸುರಕ್ಷತೆ ಕೇವಲ ಪೊಲೀಸರ ಅಥವಾ ಸರ್ಕಾರದ ಹೊಣೆಗಾರಿಕೆ ಅಲ್ಲ. ಪಾಲಕರು, ಶಿಕ್ಷಕರು, ಸಮಾಜ, ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಎಲ್ಲರೂ ಈ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗಿದೆ. ಮಕ್ಕಳ ವರ್ತನೆಯಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ ಅದನ್ನು ಸಾಮಾನ್ಯವೆಂದು ನಿರ್ಲಕ್ಷಿಸಬಾರದು.
ಮಕ್ಕಳೊಂದಿಗೆ ಮುಕ್ತ ಸಂಭಾಷಣೆ, ಮಾನಸಿಕ ಬೆಂಬಲ ಮತ್ತು ವಿಶ್ವಾಸದ ವಾತಾವರಣ ನಿರ್ಮಾಣ ಅತ್ಯಗತ್ಯವಾಗಿದೆ.ಒಂದು ಸಮಾಜದ ನಾಗರಿಕತೆ ಅಳೆಯುವುದು ಕೇವಲ ಕಟ್ಟಡಗಳಿಂದ ಅಲ್ಲ. ತನ್ನ ಮಕ್ಕಳನ್ನು ಅದು ಎಷ್ಟು ಸುರಕ್ಷಿತವಾಗಿರಿಸುತ್ತದೆ ಎಂಬುದರಿಂದ. ಅಂಕೋಲಾದಂತಹ ಘಟನೆಗಳು ಮರುಕಳಿಸಬಾರದು ಎಂದರೆ ಕಠಿಣ ಶಿಕ್ಷೆಯಷ್ಟೇ ಸಾಲದು, ಸಾಮಾಜಿಕ ಜಾಗೃತಿ ಮತ್ತು ಮೌಲ್ಯಾಧಾರಿತ ಶಿಕ್ಷಣವೂ ಅನಿವಾರ್ಯ.