ಜೋಯಿಡಾ: ಗಣೇಶಗುಡಿ ಸಮೀಪ ರಾಫ್ಟಿಂಗ್ ಮುಗಿಸಿ ಬೋಟಿನಿಂದ ಇಳಿದ ಯುವಕನೊಬ್ಬ ಕರೆಂಟ್ ಶಾಕ್ಗೆ ಒಳಗಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಸಿಲ್ವರ್ ಬಿಲ್ಲ ರೆಸಾರ್ಟ್ ಮಾಲಕರು ಹಾಗೂ ಸಂಬಂಧಪಟ್ಟವರ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 23ರಂದು ಮೃತ ಮಹೇಶ್ ಮೋರ್ಲಾ ತನ್ನ ಸ್ನೇಹಿತರೊಂದಿಗೆ ಕರ್ನಾಟಕ ಪ್ರವಾಸಕ್ಕೆ ಬಂದಿದ್ದು, ಮಧ್ಯಾಹ್ನ ಗಣೇಶಗುಡಿಯಲ್ಲಿ ರಾಫ್ಟಿಂಗ್ ನಡೆಸಿದ್ದರು. ಸಂಜೆ 4.30ರ ಸುಮಾರಿಗೆ ಸಿಲ್ವರ್ ಬಿಲ್ಲ ರೆಸಾರ್ಟ್ ಸಮೀಪ ರಾಫ್ಟಿಂಗ್ ಮುಗಿದ ಬಳಿಕ ಗೈಡ್ ಸೂಚನೆಯಂತೆ ಬೋಟಿನಿಂದ ಇಳಿದು ದಡದ ಕಡೆ ಸಾಗುತ್ತಿದ್ದ ವೇಳೆ ಮಹೇಶ್ ಏಕಾಏಕಿ ಕಿರುಚಿಕೊಂಡಿದ್ದಾನೆ. ಸಹಾಯಕ್ಕೆ ಧಾವಿಸಿದ ಸ್ನೇಹಿತರಿಗೂ ಸಹ ಕರೆಂಟ್ ಶಾಕ್ ಅನುಭವವಾಗಿದೆ ಎನ್ನಲಾಗಿದೆ.
ತಕ್ಷಣ ಗೈಡ್ ಮಹೇಶ್ ಹಾಗೂ ಮತ್ತೊಬ್ಬರನ್ನು ದಡಕ್ಕೆ ಕರೆತಂದು ಆಸ್ಪತ್ರೆಗೆ ಸಾಗಿಸಿದರೂ, ವೈದ್ಯರು ಮಹೇಶ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ರೆಸಾರ್ಟ್ ವತಿಯಿಂದ ನೀರು ಪಡೆಯಲು ಕಾಳಿನದಿ ದಡದಲ್ಲಿ ಅಳವಡಿಸಿದ್ದ ಸಬ್ಮರ್ಸಿಬಲ್ ವಾಟರ್ ಪಂಪ್ನ ವಿದ್ಯುತ್ ಸೋರಿಕೆಯಿಂದ ಈ ಅವಘಡ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿ ರೆಸಾರ್ಟ್ ಮಾಲಕರು ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.