ಅಂಕೋಲಾ: ತಾಲೂಕಿನ ಅಗಸೂರ ಗ್ರಾಮದಲ್ಲಿರುವ ಮೂರು ದೇವಸ್ಥಾನಗಳ ದೇವರ ಮೂರ್ತಿಗಳಿಗೆ ಹಾನಿ ಉಂಟುಪಡಿಸಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗಸೂರ ಗ್ರಾಮದ ದೀಪಕ ನಾರಾಯಣ ನಾಯಕ ಅವರು ನೀಡಿದ ದೂರಿನ ಆಧಾರದಲ್ಲಿ ಉಳಗದ್ದೆ ಶಿರಗುಂಜಿ ಗ್ರಾಮದ ಮಂಜು ಸೋಮು ನಾಯ್ಕ (55) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೇ 23ರಂದು ರಾತ್ರಿ 8.30ರಿಂದ 10 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತನು ಅಗಸೂರ ಗ್ರಾಮದ ಶಾಂತಿಕ ಪರಮೇಶ್ವರಿ ದೇವಸ್ಥಾನ, ಈಶ್ವರ ದೇವಸ್ಥಾನ ಹಾಗೂ ಸಣ್ಣಹೊಸಬ ದೇವಸ್ಥಾನಗಳಲ್ಲಿ ಗ್ರಾಮಸ್ಥರು ಪ್ರತಿದಿನ ಪೂಜಿಸುತ್ತಿದ್ದ ದೇವರ ಮೂರ್ತಿಗಳನ್ನು ಭಗ್ನಗೊಳಿಸಿ ಹಾನಿ ಉಂಟುಪಡಿಸಿದ್ದಾನೆ.
ಈ ಕೃತ್ಯದಿಂದ ಗ್ರಾಮಸ್ಥರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದು, ದೇವರ ಮೂರ್ತಿಗಳನ್ನು ಭಗ್ನಗೊಳಿಸಿ ನಾಶಪಡಿಸಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.