ಕಾರವಾರ: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿ 1991-92ರಿಂದ 2021-22ರ ಅವಧಿಯಲ್ಲಿ ಮೋಟಾರು ವಾಹನ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಮತ್ತು ಇನ್ನೂ ಬಾಕಿ ಉಳಿದಿರುವ ಇಲಾಖಾ ಶಾಸನ (ಡಿ.ಎಸ್.ಎ.) ಪ್ರಕರಣಗಳ ದಂಡದ ಮೊತ್ತದಲ್ಲಿ ರಾಜ್ಯ ಸರ್ಕಾರ ಶೇ. 50ರಷ್ಟು ರಿಯಾಯಿತಿ ಘೋಷಿಸಿದೆ.
ಈ ಯೋಜನೆಯಡಿ ವಾಹನ ಮಾಲೀಕರು ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಜೂನ್ 21ರಿಂದ ಜುಲೈ 10ರವರೆಗೆ (20 ದಿನಗಳ ಕಾಲ) ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ದಂಡದ ಮೊತ್ತದ ಕೇವಲ ಶೇ. 50ರಷ್ಟು ಹಣ ಪಾವತಿಸುವ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದಾಗಿದೆ.
ದಂಡ ಪಾವತಿಗಾಗಿ ಯಾವುದೇ ಆನ್ಲೈನ್ ವ್ಯವಸ್ಥೆ ಅಥವಾ ಲಿಂಕ್ ಇರುವುದಿಲ್ಲ. ವಾಹನ ಮಾಲೀಕರು ಕಚೇರಿ ವೇಳೆಯಲ್ಲಿ ಸಂಬಂಧಿತ ಸಾರಿಗೆ ಕಚೇರಿಗೆ ಭೇಟಿ ನೀಡಿ, ನಗದು ಕೌಂಟರ್ನಲ್ಲಿ ದಂಡದ ಮೊತ್ತ ಪಾವತಿಸಿ ರಶೀದಿ ಪಡೆದು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಹೊನ್ನಾವರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.