ಗೋಕರ್ಣ: ಪಿತ್ರಾರ್ಜಿತ ಆಸ್ತಿಯಲ್ಲಿನ ತೆಂಗಿನಕಾಯಿ ಕೀಳುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳವು ಹಲ್ಲೆಗೆ ತಿರುಗಿದ ಘಟನೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೇವರಬಾವಿ, ತೊರ್ಕೆ ನಿವಾಸಿ ರಾಮಾ ಪರಮೇಶ್ವರ ಭಂಡಾರಿ (54) ನೀಡಿದ ದೂರಿನ ಮೇರೆಗೆ, ಹೊಸ್ಕಟ್ಟಾ ನಿವಾಸಿ ಶಿವಾನಂದ ಗಜಾನನ ಹೊಸ್ಕಟ್ಟಾ ಹಾಗೂ ಅವರ ಪತ್ನಿಯ ಅಣ್ಣ-ತಮ್ಮಂದಿರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜೂನ್ 7ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಫರ್ಯಾದಿದಾರರು ಮತ್ತು ಅವರ ಅಕ್ಕನ ಅಳಿಯ ವಿಲ್ಸನ್ ಡಿಸೋಜಾ ಅವರು ಹೊಸ್ಕಟ್ಟಾದಲ್ಲಿರುವ ಪಿತ್ರಾರ್ಜಿತ ಜಾಗದಲ್ಲಿ ತೆಂಗಿನಕಾಯಿ ಕೀಳಲು ತೆರಳಿದ್ದರು. ಈ ವೇಳೆ ಶಿವಾನಂದ ಹೊಸ್ಕಟ್ಟಾ ಅಲ್ಲಿಗೆ ಬಂದು, “ಇಲ್ಲಿ ಬರಲು ನಿಮಗೇನು ಸಂಬಂಧವಿದೆ?” ಎಂದು ಪ್ರಶ್ನಿಸಿ ಕೈಯಿಂದ ಬಾರಿಸಿದ್ದಲ್ಲದೆ, ತೆಂಗಿನ ಹೆಡೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಫರ್ಯಾದಿದಾರರ ಅಣ್ಣ ರಿಕ್ಷಾದಲ್ಲಿ ಸ್ಥಳಕ್ಕೆ ಬಂದಾಗ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ದೂರು ನೀಡಲು ಪೊಲೀಸ್ ಠಾಣೆಗೆ ತೆರಳುತ್ತಿದ್ದ ವೇಳೆ, ಶಿವಾನಂದ ಹೊಸ್ಕಟ್ಟಾ ಅವರ ಪತ್ನಿಯ ಅಣ್ಣ-ತಮ್ಮಂದಿರು ಸೇರಿ ಪಿರ್ಯಾದಿದಾರರನ್ನು ಅಡ್ಡಗಟ್ಟಿ ಮತ್ತೊಮ್ಮೆ ಹಲ್ಲೆ ನಡೆಸಿ ಗಾಯಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.