ಶಿರಸಿ: ಬೀದಿ ನಾಟಕಗಳಿಂದ ಸಾಮಾಜಿಕ ಪಿಡುಗುಗಳಾದ ಮದ್ಯಪಾನ, ವರದಕ್ಷಿಣೆ, ಬಾಲ್ಯ ವಿವಾಹಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬಹುದು ಎಂದು ಹುಲೇಕಲ್ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಖಾಸಿಂ ಸಾಬ್ ಹೇಳಿದರು.
ತಾಲೂನ ಹುಲೇಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಸಬಲೀಕರಣಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ತಳಮಟ್ಟದವರೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಬೀದಿ ನಾಟಕದಂತಹ ಪ್ರಯೋಗಗಳಿಂದ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹುಲೇಕಲ್ ಒಕ್ಕೂಟದ ಅಧ್ಯಕ್ಷ ವಿಜಯ್ ಫೆರ್ನಾಂಡೀಸ್ ಮಾತನಾಡಿ, ಬೀದಿ ನಾಟಕದ ಉದ್ದೇಶ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಸರಳವಾಗಿ ಅರಿವು ಮೂಡಿಸುವುದಾಗಿದೆ. ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಮಹಿಳೆಯರು ಸಬಲರಾಗಬೇಕು, ಸಮಾಜದಲ್ಲಿ ಅರಿವು ಮೂಡಬೇಕು ಎಂಬುದೇ ಗ್ರಾಮಾಭಿವೃದ್ದಿ ಯೋಜನೆಯ ಗುರಿ ಎಂದರು.
ಕಾರವಾರದ ಬಂಟದೇವ ಯುವಕ ಸಂಘದ ಕಲಾವಿದರು ಬಾಲ್ಯ ವಿವಾಹ, ಹಸಿ ಕಸ-ಒಣ ಕಸ ವಿಂಗಡಣೆ, ಹೆಲ್ಮೆಟ್ ಬಳಕೆಯ ಮಹತ್ವ, ನೀರಿನ ಸಮರ್ಪಕ ಬಳಕೆ, ದುಶ್ಚಟಗಳ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಕಾರ್ಯದರ್ಶಿ ಅಣ್ಣಪ್ಪ, ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲ್ಲೂಕು ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ, ವಲಯ ಮೇಲ್ವಿಚಾರಕ ಡಿ.ಸಿ. ಗಣಪತಿ, ಕಲಾ ತಂಡದ ಮುಖ್ಯಸ್ಥರಾದ ಪುರುಷೋತ್ತಮ ಗೌಡ, ಒಕ್ಕೂಟದ ಉಪಾಧ್ಯಕ್ಷೆ ಲಲಿತಾ ಫೆರ್ನಾಂಡೀಸ್, ಸಹ ಕಾರ್ಯದರ್ಶಿ ನಾರಾಯಣ ಮರಾಠಿ, ಸೇವಾ ಪ್ರತಿನಿಧಿ ಪಾರ್ವತಿ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಗ್ರಾಪಂ ಸಿಬ್ಬಂದಿ, ಮಹಿಳಾ ಜ್ಞಾನ ವಿಕಾಸದ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.