ಹೊನ್ನಾವರ: ಶರಾವತಿ ನದಿಯ ಕೋಡಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ಹೊನ್ನಾವರ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಹೊನ್ನಾವರ ತಾಲೂಕಿನ ಕೆಳಗಿನ ಮೂಡ್ಕಣಿ ಪ್ರದೇಶದ ಶರಾವತಿ ನದಿಯ ಕೋಡಿ ಬಳಿ ಗುರುವಾರ ಬೆಳಿಗ್ಗೆ ಸುಮಾರು 11.45ರ ವೇಳೆಗೆ ಕೆಲವರು ಹಣವನ್ನು ಪಣವಾಗಿ ಕಟ್ಟಿ ಕೋಳಿ ಅಂಕ ಜುಗಾರಿ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ವಿಲಿಯಂ ಸಂತಾನ ಮಿರಾಂಡ (41), ಮಂಜುನಾಥ ನಾಯ್ಕ (62) ಹಾಗೂ ಶ್ರೀಪಾದ ನಾಯ್ಕ (30) ಎಂಬುವರು ಸಿಕ್ಕಿಬಿದ್ದಿದ್ದು, ಸಮರ್ಥ ನಾಯ್ಕ, ಭರತ್ ಹಳ್ಳೇರ ಸೇರಿದಂತೆ ಇನ್ನೂ ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯ ವೇಳೆ ₹2,460 ನಗದು, ಒಂದು ಕೋಳಿ ಹುಂಜ ಹಾಗೂ ಕೋಳಿ ಅಂಕಕ್ಕೆ ಬಳಸಲಾಗುತ್ತಿದ್ದ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪರಾರಿಯಾದ ಆರೋಪಿತರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.