ಬನವಾಸಿ: ಗೋವಾ ರಾಜ್ಯದಿಂದ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ದಾವಣಗೆರೆ ಜಿಲ್ಲೆಯ ಇಬ್ಬರನ್ನು ಬನವಾಸಿ ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಬಂಧಿತರನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣಿವೆ ಬಿಳಚಿ ಗ್ರಾಮದ ಅರುಣ್ ರಾಮಚಂದ್ರ ರಾವ್ (35) ಹಾಗೂ ರಾಘವೇಂದ್ರ ಫಕ್ಕಿರಪ್ಪ (43) ಎಂದು ಗುರುತಿಸಲಾಗಿದೆ.
ಜೂನ್ 19ರಂದು ಬೆಳಿಗ್ಗೆ ಸುಮಾರು 3.30 ಗಂಟೆಗೆ ಗೋವಾದಿಂದ ದಾವಣಗೆರೆ ಕಡೆಗೆ ತೆರಳುತ್ತಿದ್ದ ಹುಂಡೈ ವೆನ್ಯೂ ಕಾರು (ಕೆಎ-17 ಎಂಎ-3075)ಯನ್ನು ಬನವಾಸಿ-ಶಿರಸಿ ರಸ್ತೆಯ ಕದಂಬ ಸರ್ಕಲ್ ಸಮೀಪ ರಾತ್ರಿ ವಿಶೇಷ ಗಸ್ತಿನ ವೇಳೆ ತಡೆದು ಪರಿಶೀಲಿಸಲಾಗಿದೆ.
ಈ ವೇಳೆ ಕಾರಿನೊಳಗೆ ಮೂರು ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಲಾಗಿದ್ದ ಐದು ರಟ್ಟಿನ ಬಾಕ್ಸ್ಗಳಲ್ಲಿ ಒಟ್ಟು 60 ಮದ್ಯದ ಬಾಟಲಿಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಮದ್ಯದ ಅಂದಾಜು ಮೌಲ್ಯ ₹22,200 ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಕಾರ್ಯಕ್ರಮಕ್ಕಾಗಿ ಮದ್ಯವನ್ನು ಸಾಗಿಸುತ್ತಿದ್ದುದಾಗಿ ಆರೋಪಿಗಳು ಹೇಳಿಕೊಂಡಿದ್ದರೂ, ಸಾಗಾಟಕ್ಕೆ ಅಗತ್ಯವಿರುವ ಯಾವುದೇ ಪಾಸ್ ಅಥವಾ ಪರ್ಮಿಟ್ ಹೊಂದಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸ್ ಉಪ ನಿರೀಕ್ಷಕ ರವೀಂದ್ರ ಬಿರಾದಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮದ್ಯ, ಬಾಕ್ಸ್ಗಳು ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.