ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ–52ರ ಚಿಕ್ಕಮಾವಳ್ಳಿ ಕ್ರಾಸ್ ಸಮೀಪ ಕಾರನ್ನು ಓವರ್ಟೇಕ್ ಮಾಡುವ ವೇಳೆ ಸ್ಕೂಟಿ ನೇರವಾಗಿ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಭಾನುವಾರ ಸಂಜೆ ನಡೆದಿದೆ.
ಮೃತರನ್ನು ಮಂಜುನಾಥ (27) ಹಾಗೂ ಸುಮೀತ್ (18) ಎಂದು ಗುರುತಿಸಲಾಗಿದೆ. ಇಬ್ಬರೂ ಹಳೆ ಹುಬ್ಬಳ್ಳಿ ನಿವಾಸಿಗಳಾಗಿದ್ದಾರೆ.
ಕಾರವಾರದಿಂದ ಸಿಂಧನೂರಿಗೆ ತೆರಳಿ ಮರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ (KA-31 F-1664) ಚಿಕ್ಕಮಾವಳ್ಳಿ ಕ್ರಾಸ್ ಬಳಿ ಬರುತ್ತಿದ್ದಾಗ, ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸ್ಕೂಟಿ (KA-63 EB-8690) ಮುಂಭಾಗದಲ್ಲಿ ಸಾಗುತ್ತಿದ್ದ ಕಾರನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಓವರ್ಟೇಕ್ ಮಾಡಲು ಮುಂದಾಗಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಬಸ್ಗೆ ಸ್ಕೂಟಿ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಈ ಇಬ್ಬರೂ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ. ಅಪಘಾತದ ತೀವ್ರತೆಗೆ ಸ್ಕೂಟಿ ಚಾಲಕ ಮಂಜುನಾಥ ಹಾಗೂ ಹಿಂಬದಿ ಸವಾರ ಸುಮೀತ್ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸ್ಕೂಟಿ ಹಾಗೂ ಬಸ್ಗೆ ಹಾನಿಯಾಗಿದೆ.
ಬಸ್ ನಿರ್ವಾಹಕ ಸುರೇಶ್ ಗುಬ್ಬೆವಾಡ ನೀಡಿದ ದೂರಿನ ಮೇರೆಗೆ, ಮೃತ ಸ್ಕೂಟಿ ಚಾಲಕನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ನಲ್ಲಿ ಅಳವಡಿಸಲಾಗಿದ್ದ ಡ್ಯಾಶ್ಕ್ಯಾಮ್ ದೃಶ್ಯಾವಳಿಯನ್ನೂ ತನಿಖೆಗೆ ಪರಿಗಣಿಸಲಾಗಿದೆ.