ಯಲ್ಲಾಪುರ: ಮದುವೆಯಾಗದ ನೋವು ಹಾಗೂ ಏಕಾಂಗಿ ಜೀವನದ ಬೇಸರದಿಂದ ಮನನೊಂದಿದ್ದ ವ್ಯಕ್ತಿಯೊಬ್ಬರು ಕಾಡಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆನಗೋಡ ಗ್ರಾಮದ ಕೊಂಬೆಮನೆ ಬಸ್ ನಿಲ್ದಾಣದ ಸಮೀಪದ ಅರಣ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು ಮಾದೇವಕೊಪ್ಪ ನಿವಾಸಿ ರಾಮಕೃಷ್ಣ ರಾಘೋಬ ನಾಯ್ಕ (70) ಎಂದು ಗುರುತಿಸಲಾಗಿದೆ.
ರಾಮಕೃಷ್ಣ ಅವರು ಮದುವೆಯಾಗದೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದು, ಇದೇ ವಿಚಾರವಾಗಿ ಕೆಲ ದಿನಗಳಿಂದ ತೀವ್ರ ಬೇಸರದಲ್ಲಿದ್ದರು ಎನ್ನಲಾಗಿದೆ. ಜುಲೈ 10ರ ಬೆಳಿಗ್ಗೆಯಿಂದ ಜುಲೈ 14ರ ಬೆಳಗ್ಗೆ ನಡುವಿನ ಅವಧಿಯಲ್ಲಿ ಅವರು ಕೊಂಬೆಮನೆ ಬಸ್ ನಿಲ್ದಾಣದ ಸಮೀಪದ ಅರಣ್ಯ ಪ್ರದೇಶದಲ್ಲಿರುವ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೃತರ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕುಟುಂಬದವರು ನೀಡಿದ ಮಾಹಿತಿಯ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.