ಕಾರವಾರ: ಮದ್ಯದ ಅಮಲಿನಲ್ಲಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ ಚಾಲಕನೊಬ್ಬ ರಿವರ್ಸ್ನಲ್ಲಿ ವಾಹನ ಚಲಾಯಿಸಿ ಸರಣಿ ಅಪಘಾತಕ್ಕೆ ಕಾರಣವಾದ ಘಟನೆ ಕಾರವಾರ ನಗರದಲ್ಲಿ ಭಾನುವಾರ (ಜು. 19) ನಡೆದಿದೆ.
ಘಟನೆಯಲ್ಲಿ ತರಕಾರಿ ವ್ಯಾಪಾರಿಯೊಬ್ಬರಿಗೆ ಗಾಯಗಳಾಗಿದ್ದು, ಕಾರುಗಳು ಕೂಡ ಹಾನಿಗೊಳಗಾಗಿವೆ.ಬಾಡದ ಸೋನಾರವಾಡ ನಿವಾಸಿ, 45 ವರ್ಷದ ವಸಂತ ಕೆರಿಯಪ್ಪ ಶೇಟ ಎಂಬಾತ ಮದ್ಯಪಾನದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ.
ಗಿಂಡಿವಾಡ ಸರ್ಕಾರಿ ಶಾಲೆ ಸಮೀಪ ತನ್ನ ಕಾರನ್ನು ಏಕಾಏಕಿ ತಿರುಗಿಸಿ, ವೇಗವಾಗಿ ರಿವರ್ಸ್ನಲ್ಲಿ ಚಲಾಯಿಸಿದ ವೇಳೆ ಸಾಯಿನಗರ ಮಾರ್ಗದಲ್ಲಿ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಆ ಕಾರು ಜಖಂಗೊಂಡಿದೆ.
ಅದಾದ ಬಳಿಕವೂ ಕಾರು ನಿಲ್ಲಿಸದೇ ಮುಂದುವರಿದ ಚಾಲಕ, ಕಾರವಾರದ ಶಿವಾಜಿ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ 108 ಆಂಬುಲೆನ್ಸ್ಗೆ ರಿವರ್ಸ್ನಲ್ಲಿ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಅಲ್ಲೇ ತರಕಾರಿ ಮಾರಾಟ ಮಾಡುತ್ತಿದ್ದ ಅಮದಳ್ಳಿ ನಿವಾಸಿ ಪ್ರಮೀಳಾ ಪಾಂಡುರಂಗ ತಳೇಕರ (67) ಅವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಎಡ ಕಾಲಿನ ಪಾದ ಹಾಗೂ ಎಡ ಭುಜಕ್ಕೆ ಗಾಯಗಳಾಗಿವೆ.
ಘಟನೆಯಲ್ಲಿ ಆರೋಪಿ ಚಲಾಯಿಸುತ್ತಿದ್ದ ಕಾರಿಗೂ ಹಾನಿಯಾಗಿದೆ. ಈ ಸಂಬಂಧ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.