ಯಲ್ಲಾಪುರ: ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಆದೇಶದ ಮೇರೆಗೆ ಬೇಡ್ತಿ ನದಿ ತಿರುವು ಯೋಜನೆ ಜಾರಿಯಾಗದಂತೆ ಆಗ್ರಹಿಸಲು ಹಾಗೂ ಪವಿತ್ರವಾದ ನಮ್ಮ ನದಿ, ಹಳ್ಳಗಳ ಉಳಿವಿಗಾಗಿ ದೇವರಲ್ಲಿ ಪ್ರಾರ್ಥಿಸುವ ಸಂಕಲ್ಪದೊಂದಿಗೆ ಶಿವರಾತ್ರಿಯ ಪರ್ವಕಾಲದಲ್ಲಿ ನದಿ ಪೂಜೆಯನ್ನು ನಡೆಸಬೇಕು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಬೇಡ್ತಿ ಸೇತುವೆಯ ಹುಲಿಯಪ್ಪನ ಸನ್ನಿಧಾನದಲ್ಲಿ ಫೆ. 15, ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ನದೀ ಪೂಜೆ ನಡೆಸಲು ಉದ್ದೇಶಿಸಲಾಗಿದೆ.
ನದಿ ತಟದ ಅಕ್ಕಪಕ್ಕದ ಉಪಳೇಶ್ವರ,ಹುತ್ಕಂಡ, ಚಂದ್ಗುಳಿ, ಮಳಲಗಾಂವ್ ಸೇರಿದಂತೆ ಎಲ್ಲಾ ಊರುಗಳ ನಾಗರಿಕರು ನದೀ ಪೂಜೆಯಲ್ಲಿ ಪಾಲ್ಗೊಂಡು ಗಂಗಾ ಆರತಿಯನ್ನು ವೀಕ್ಷಿಸಿ, ಶ್ರೀ ದೇವರಲ್ಲಿ, ಗಂಗಾಮಾತೆಯಲ್ಲಿ ಯೋಜನೆ ಜಾರಿಯಾಗದಂತೆ ಪ್ರಾರ್ಥಿಸಿಕೊಳ್ಳಲು ವಿನಂತಿಸಿದೆ. ಹಿರಿಯರು, ಮಾರ್ಗದರ್ಶಕರು, ಶ್ರೀಮಠದ ಪ್ರತಿನಿಧಿಗಳೂ ಆದ ವೇ. ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಸಂಕಲ್ಪ ,ಪ್ರಾರ್ಥನೆ ಮಾಡಿ ನದಿ ಪೂಜೆಯನ್ನು ನೆರವೇರಿಸಿಕೊಡಲಿದ್ದಾರೆ ಎಂದು ಬೇಡ್ತಿ-ಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ, ಪ್ರಮುಖರಾದ ನಾಗರಾಜ ಕವಡಿಕೆರೆ, ಸುಬ್ಬಣ್ಣ ಉದ್ದಾಬೈಲ್, ನರಸಿಂಹ ಜೂಜನಬೈಲ್, ಶ್ರೀಕಾಂತ ಭಾಗ್ವತ್ ಮಳಲಗಾಂವ್, ಮಂಜುನಾಥ ಬರಾಳ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.