ಯಲ್ಲಾಪುರ: ಗ್ರಾಮೀಣ ಭಾಗದ ಜನರಿಗೆ ಡಿಜಿಪೇ ತ್ವರಿತ ಪಾವತಿ ಸೇವೆ ನೀಡುತ್ತಿರುವುದು ಅತ್ಯಂತ ಉಪಯುಕ್ತವಾಗಿದೆ. ಸಣ್ಣ ಮೊತ್ತದ ಹಣ ಪಡೆಯಲು ಕಮಿಷನ್ ನೀಡಬೇಕಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಈ ಸೇವೆ ಪಾರದರ್ಶಕ, ಸುರಕ್ಷಿತ ಹಾಗೂ ಸುಲಭ ಹಣಕಾಸು ವ್ಯವಸ್ಥೆಯನ್ನು ಒದಗಿಸುತ್ತದೆ. ಸೇವಾದಾರರು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಸೇವೆ ಸಲ್ಲಿಸುವ ಮೂಲಕ ಯೋಜನೆಯ ಉದ್ದೇಶವನ್ನು ಯಶಸ್ವಿಗೊಳಿಸಬೇಕು ಎಂದು ವಿಕಾಸ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳೀಧರ ಹೆಗಡೆ ಹೇಳಿದರು.
ಇಡಗುಂದಿಯ ಗ್ರಾಹಕರ ಸೇವಾ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಹಾಗೂ ಬಿ.ಸಿ. ಟ್ರಸ್ಟ್ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಜನಪರ ಕಾರ್ಯಕ್ರಮಗಳ ಅಂಗವಾಗಿ ಡಿಜಿಪೇ (DIGIPAY) ತ್ವರಿತ ಪಾವತಿ ಸೇವೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 20 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರ ಅಭಿವೃದ್ಧಿಗಾಗಿ ನಿರಂತರವಾಗಿ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ಯೋಜನೆಯ ಮೂಲಕ ಮಹಿಳೆಯರು ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿರುವುದು ಸಂತಸದ ವಿಷಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ 2006ರಿಂದ 2026ರವರೆಗೆ ಒಕ್ಕೂಟದ ಚುಕ್ಕಾಣಿ ಹಿಡಿದು ಸೇವೆ ಸಲ್ಲಿಸಿದ ಮಂಗಲಾ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅರುಣ ಭಂಡಾರಿ, ಶಿವಾನಂದ ನಾಯ್ಕ್, ಉದಯ್ ನಾಯ್ಕ್, ವಿಷ್ಣು ನಾಯ್ಕ್, ಉಮಾ ಮಹೇಶ್ವರ, ಬಾಂದಿ-ಗುಳ್ಳಾಪುರ ಒಕ್ಕೂಟದ ಉಪಾಧ್ಯಕ್ಷೆ ಕಮಲಾ ಸಿದ್ದಿ, ದಿವ್ಯ ನವಜೀವನ ಸಮಿತಿಯ ಅಧ್ಯಕ್ಷ ಶ್ರೀಪಾದ್, ನಾರಾಯಣಗೌಡ, ಜ್ಞಾನ ವಿಕಾಸ ಸಂಯೋಜಕಿ, ಶೌರ್ಯ ಘಟಕದ ಸದಸ್ಯರು, ಒಕ್ಕೂಟದ ಸದಸ್ಯರು, ಮೇಲ್ವಿಚಾರಕ ಮಹಾಂತಯ್ಯ, ಸೇವಾದಾರರಾದ m ಮೇಘಾ, ಸಹಾಯಕಿ ಸ್ವಾತಿ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ರಾಜೀವಿ ಮನೋಹರ್ ಕಾರ್ಯಕ್ರಮ ನಿರ್ವಹಿಸಿದರು.