ಗುರುಪೂರ್ಣಿಮೆಯಂದು ಶ್ರೀ ರಾಮಕೃಷ್ಣ ಆಶ್ರಮಕ್ಕೆ ರೂಪಾಲಿ ನಾಯ್ಕ್ ಭೇಟಿ
ಕಾರವಾರ: ಆಧ್ಯಾತ್ಮಿಕ ಸಂಸ್ಥೆಗಳು ಸಮಾಜದಲ್ಲಿ ಸಂಸ್ಕಾರ, ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಕೇಂದ್ರಗಳಾಗಿವೆ. ಇಂತಹ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಮಾಜದ ಒಳಿತಿಗಾಗಿ ಕೆಲಸ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ್ ಹೇಳಿದರು.
ಗುರುಪೂರ್ಣಿಮೆಯ ಅಂಗವಾಗಿ ಕಾರವಾರದ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ ಅವರು, ಪೂಜ್ಯ ಸ್ವಾಮೀಜಿಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಬಳಿಕ ಆಶ್ರಮದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಗುರುಪೂಜೆಯ ಮಹತ್ವವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಗುರುಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಿದ ರೂಪಾಲಿ ನಾಯ್ಕ್, ಸಮಾಜಮುಖಿ ಸೇವೆ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಆಶ್ರಮದಲ್ಲಿ ನೆರೆದಿದ್ದ ಭಕ್ತರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆತ ಅವರು, ಗುರುಪೂರ್ಣಿಮೆಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಪ್ರಸಾದ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನ್ನ ಸಾರ್ವಜನಿಕ ಸೇವೆಯ ದೊಡ್ಡ ಶಕ್ತಿ. ಅಧಿಕಾರ ಇರಲಿ ಅಥವಾ ಇರದಿರಲಿ, ಜನರೊಂದಿಗೆ ಬೆರೆತು ಅವರ ಸಂತೋಷ-ಸಂಕಷ್ಟಗಳಲ್ಲಿ ಪಾಲುದಾರಳಾಗಿರುವುದು ನನ್ನ ಬದ್ಧತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರುಡೇಕರ್, ವೈಶಾಲಿ ತಂಡೇಲ್, ನಗರಸಭೆ ಮಾಜಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.