Monday, September 7, 2026
Join WhatsApp Group
HomeLocal Storyಗೋಕರ್ಣ | ಈ ದೇವಾಲಯಕ್ಕೆ ಹೋಗದಿದ್ದರೆ ನಿಮ್ಮ ಯಾತ್ರೆ ಅಪೂರ್ಣ!

ಗೋಕರ್ಣ | ಈ ದೇವಾಲಯಕ್ಕೆ ಹೋಗದಿದ್ದರೆ ನಿಮ್ಮ ಯಾತ್ರೆ ಅಪೂರ್ಣ!

– Morning Bytes

ಗೋಕರ್ಣ ಎಂದರೆ ಬಹುತೇಕ ಜನರಿಗೆ ನೆನಪಾಗುವುದು ಮಹಾಬಲೇಶ್ವರ ದೇವಾಲಯ, ಆತ್ಮಲಿಂಗ ಮತ್ತು ಸಮುದ್ರ. ಸಾವಿರಾರು ಭಕ್ತರು ದೂರದೂರಿನಿಂದ ಬಂದು ಶಿವನ ದರ್ಶನ ಪಡೆದು ಹಿಂದಿರುಗುತ್ತಾರೆ.

ಆದರೆ ಗೋಕರ್ಣದ ಪುರಾಣವನ್ನು ಸಂಪೂರ್ಣವಾಗಿ ಅರಿಯಬೇಕೆಂದರೆ, ಮಹಾಬಲೇಶ್ವರ ದೇವಾಲಯದ ಆವರಣದಲ್ಲಿರುವ ಒಂದು ಪುಟ್ಟ ದೇವಾಲಯಕ್ಕೂ ಕಾಲಿಡಲೇಬೇಕು. ಅದು ತಾಮ್ರಗೌರಿ ದೇವಾಲಯ. ಗಾತ್ರದಲ್ಲಿ ಚಿಕ್ಕದಾದರೂ, ಅದರ ಹಿಂದೆ ಅಡಗಿರುವ ಕಥೆ ಮಾತ್ರ ಭಾರತೀಯ ಪುರಾಣಗಳಲ್ಲೇ ಅಪರೂಪದದ್ದು.

ಗೋಕರ್ಣದ ಸ್ಥಳೀಯ ಪುರಾಣದ ಪ್ರಕಾರ, ಶಿವನಿಗೆ ಮೊದಲು ಮದುವೆಯ ಪ್ರಸ್ತಾಪ ಮಾಡಿದ್ದು ಪಾರ್ವತಿ ದೇವಿಯೇ! ಇದೇ ನಂಬಿಕೆ ತಾಮ್ರಗೌರಿ ದೇವಾಲಯದ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ರಾವಣನು ಆತ್ಮಲಿಂಗವನ್ನು ಪಡೆಯಲು ಶಿವನನ್ನು ಕಠಿಣ ತಪಸ್ಸಿನಿಂದ ಒಲಿಸಿಕೊಂಡ ಕಥೆ ಎಲ್ಲರಿಗೂ ಪರಿಚಿತ. ಆದರೆ ಅದರ ಹಿಂದೆ ಇನ್ನೊಂದು ಕುತೂಹಲಕಾರಿ ಘಟನೆಯೂ ಇದೆ ಎಂದು ಸ್ಥಳೀಯ ಪುರಾಣ ಹೇಳುತ್ತದೆ.

ದೇವತೆಗಳ ಉಪಾಯದಿಂದ ರಾವಣನು ಆತ್ಮಲಿಂಗದ ಬದಲು ಪಾರ್ವತಿ ದೇವಿಯನ್ನು ವರವಾಗಿ ಕೇಳಿಬಿಡುತ್ತಾನೆ. ಶಿವನು ಕೊಟ್ಟ ಮಾತನ್ನು ತಪ್ಪಿಸಲಾಗದ ಕಾರಣ ಪಾರ್ವತಿ ಅದಕ್ಕೆ ಒಪ್ಪುತ್ತಾಳೆ. ಆದರೆ ಒಂದು ಷರತ್ತು ಇಡುತ್ತಾಳೆ. ಅದೇನೆಂದರೆ, ʻಲಂಕೆ ತಲುಪುವವರೆಗೂ ಧರ್ಮದ ಮಿತಿಯನ್ನು ಮೀರುವಂತಿಲ್ಲʼ ಎಂದು.

ಆದರೆ ಮಧ್ಯದಲ್ಲೇ ಕಥೆ ತಿರುವು ಪಡೆಯುತ್ತದೆ. ರಾವಣನು ಮಾಯಾಸುರನ ಪುತ್ರಿ ಮಂಡೋದರಿಯನ್ನು ನೋಡಿ ಆಕೆಯ ಮೇಲೆಯೇ ಮೋಹಗೊಳ್ಳುತ್ತಾನೆ. ಪಾರ್ವತಿಯನ್ನು ಮರೆತು ಮಂಡೋದರಿಯನ್ನೇ ಮದುವೆಯಾಗಲು ನಿರ್ಧರಿಸುತ್ತಾನೆ. ಪಾರ್ವತಿ ಇದನ್ನು ಪ್ರಶ್ನಿಸಿದಾಗ, ರಾವಣ ಬಲವಂತವಾಗಿ ತನ್ನೊಂದಿಗೆ ಬರಲು ಒತ್ತಾಯಿಸುತ್ತಾನೆ ಎನ್ನುವುದು ಸ್ಥಳೀಯ ದಂತಕಥೆ.

ಅದೇ ಕ್ಷಣದಲ್ಲಿ ಪಾರ್ವತಿ ತನ್ನ ದೈವಿಕ ಶಕ್ತಿಯನ್ನು ಪ್ರದರ್ಶಿಸಿ ರಾವಣನಿಗೆ ಅವನ ಅಹಂಕಾರದ ಅರಿವು ಮೂಡಿಸುತ್ತಾಳೆ. ತನ್ನ ತಪ್ಪನ್ನು ಮನಗಂಡ ರಾವಣ, ಪಾರ್ವತಿಯನ್ನು ಗೌರವದಿಂದ ಶಿವನ ಬಳಿಗೆ ಮರಳಿ ಕರೆತಂದು ಒಪ್ಪಿಸುತ್ತಾನೆ. ಈ ಘಟನೆಯ ಸ್ಮರಣಾರ್ಥವೇ ಗೋಕರ್ಣದಲ್ಲಿ ತಾಮ್ರಗೌರಿ ದೇವಿಯ ಸನ್ನಿಧಿ ಸ್ಥಾಪನೆಯಾಯಿತು ಎಂದು ಭಕ್ತರು ನಂಬುತ್ತಾರೆ.

ಈ ದೇವಾಲಯದಲ್ಲಿ ಮತ್ತೊಂದು ಕುತೂಹಲಕಾರಿ ಸಂಕೇತವೂ ಇದೆ. ದೇವಿಯ ಕೈಯಲ್ಲಿ ತಕ್ಕಡಿ ಕಾಣಿಸುತ್ತದೆ. ಸ್ಥಳೀಯ ನಂಬಿಕೆಯ ಪ್ರಕಾರ, ಇದು ಕಾಶಿ ಮತ್ತು ಗೋಕರ್ಣದ ಆಧ್ಯಾತ್ಮಿಕ ಮಹತ್ವವನ್ನು ತೂಗುತ್ತಿರುವ ಸಂಕೇತ. ದೇವಿಯೇ ಗೋಕರ್ಣಕ್ಕೂ ಕಾಶಿಯಷ್ಟೇ ಪವಿತ್ರ ಸ್ಥಾನವಿದೆ ಎಂದು ಘೋಷಿಸಿದ್ದಾಳೆ ಎಂಬ ನಂಬಿಕೆಯಿಂದಲೇ ಗೋಕರ್ಣವನ್ನು ಇಂದಿಗೂ “ದಕ್ಷಿಣ ಕಾಶಿ” ಎಂದು ಕರೆಯಲಾಗುತ್ತದೆ.

ಆದ್ದರಿಂದಲೇ ಗೋಕರ್ಣಕ್ಕೆ ಬರುವ ಅನೇಕ ಭಕ್ತರು ಒಂದು ಸಂಪ್ರದಾಯವನ್ನು ತಪ್ಪಿಸುವುದಿಲ್ಲ. ಮೊದಲು ಮಹಾಗಣಪತಿ, ನಂತರ ಮಹಾಬಲೇಶ್ವರ, ಕೊನೆಯಲ್ಲಿ ತಾಮ್ರಗೌರಿ ದೇವಿಯ ದರ್ಶನ. ಶಿವ ಮತ್ತು ಶಕ್ತಿಯ ಆಶೀರ್ವಾದ ಎರಡೂ ದೊರೆತಾಗಲೇ ಗೋಕರ್ಣ ಯಾತ್ರೆ ಪೂರ್ಣವಾಗುತ್ತದೆ ಎಂಬುದು ನಂಬಿಕೆ.

ತಾಮ್ರಗೌರಿ ದೇವಾಲಯಕ್ಕೆ ಸಂಬಂಧಿಸಿದ ಮತ್ತೊಂದು ವಿಶಿಷ್ಟ ಸಂಪ್ರದಾಯವೂ ಇದೆ. ಅನೇಕ ಭಕ್ತರು ತಮ್ಮ ಕುಟುಂಬದವರ ಅಸ್ಥಿಯನ್ನು ಇಲ್ಲಿಗೆ ತಂದು ವಿಸರ್ಜನೆ ಮಾಡುತ್ತಾರೆ. ಸ್ಥಳೀಯರ ನಂಬಿಕೆಯ ಪ್ರಕಾರ, ಇಲ್ಲಿ ಅಸ್ಥಿಗಳು ಪರ್ವತದಂತೆ ರಾಶಿಯಾಗುವುದಿಲ್ಲ. ಕಾಲಕ್ರಮೇಣ ಸ್ವಾಭಾವಿಕವಾಗಿ ಕರಗಿ ಹೋಗುತ್ತವೆ. ಇದೇ ಕಾರಣಕ್ಕೆ ಈ ಸ್ಥಳವನ್ನು ಮೋಕ್ಷಪ್ರದ ಕ್ಷೇತ್ರವೆಂದು ಹಲವರು ಭಾವಿಸುತ್ತಾರೆ. ಈ ನಂಬಿಕೆ ಶತಮಾನಗಳಿಂದ ಭಕ್ತರಲ್ಲಿ ಜೀವಂತವಾಗಿದ್ದು, ಗೋಕರ್ಣದ ಆಧ್ಯಾತ್ಮಿಕ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.

ಗೋಕರ್ಣದ ಸೌಂದರ್ಯ ಕೇವಲ ಸಮುದ್ರದಲ್ಲಿಲ್ಲ, ಇಂತಹ ಪುಟ್ಟ ದೇವಾಲಯಗಳ ಗೋಡೆಗಳ ನಡುವೆ ಶತಮಾನಗಳಿಂದ ಜೀವಂತವಾಗಿರುವ ಕಥೆಗಳಲ್ಲಿದೆ. ಮುಂದಿನ ಬಾರಿ ಗೋಕರ್ಣಕ್ಕೆ ಹೋದಾಗ, ಮಹಾಬಲೇಶ್ವರ ದೇವಾಲಯದ ಆವರಣದಲ್ಲಿರುವ ತಾಮ್ರಗೌರಿ ದೇವಿಯ ಸನ್ನಿಧಿಗೆ ಕೆಲವೇ ನಿಮಿಷ ಮೀಸಲಿಡಿ!

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share