ನಿರ್ಲಕ್ಷ್ಯದ ಆರೋಪದಡಿ ಮಾಲೀಕ, ಮೇಸ್ತ್ರಿ ವಿರುದ್ಧ ಪ್ರಕರಣ
ಕುಮಟಾ: ನಿರ್ಮಾಣ ಹಂತದ ಕಟ್ಟಡದಲ್ಲೇ ಕಾರ್ಮಿಕರಿಗೆ ವಾಸ್ತವ್ಯ ಕಲ್ಪಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ನಿರ್ಲಕ್ಷ್ಯದಿಂದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ ಎಂಬ ಆರೋಪದಡಿ ಕುಮಟಾ ಪೊಲೀಸ್ ಠಾಣೆಯಲ್ಲಿ ಕಟ್ಟಡ ಮಾಲೀಕ ಹಾಗೂ ಮೇಸ್ತ್ರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಂಜಿಗಟ್ಟಿ ನಿವಾಸಿ ರವಿ ಬಸಪ್ಪ ಕೆಳಗಿನಮನಿ ಅವರು ಕುಮಟಾ ತಾಲೂಕಿನ ಬಗ್ಗೋಣ ಕ್ರಾಸ್ ಸಮೀಪ ನಿರ್ಮಾಣವಾಗುತ್ತಿದ್ದ ಇನ್ಫಿನಿಟಿ ಪಾರ್ಕ್ ವ್ಯೂ ಪ್ರಾಜೆಕ್ಟ್ 2 & 3 BHK ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು.
ಪ್ರಾಜೆಕ್ಟ್ ಮಾಲೀಕ ಮಂಜುನಾಥ ಹೆಗಡೆ ಹುಬ್ಬಳ್ಳಿ ಹಾಗೂ ಮೇಸ್ತ್ರಿ ಗಣಪತಿ ಮುಕ್ರಿ ಕಾರ್ಮಿಕರಿಗೆ ಸುರಕ್ಷಿತ ವಸತಿ ವ್ಯವಸ್ಥೆ ಕಲ್ಪಿಸದೆ, ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲೇ ಉಳಿಯಲು ಅವಕಾಶ ನೀಡಿದ್ದರು. ಅಲ್ಲದೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿರಲಿಲ್ಲ ಎನ್ನಲಾಗಿದೆ.
ಆಗಸ್ಟ್ 5ರಂದು ರಾತ್ರಿ ಸುಮಾರು 9.15ರ ವೇಳೆಗೆ ರವಿ ಕೆಳಗಿನಮನಿ ಕಟ್ಟಡದಿಂದ ಜಾರಿ ಬಿದ್ದು ತಲೆ ಹಾಗೂ ದೇಹಕ್ಕೆ ಗಂಭೀರ ಒಳಪೆಟ್ಟುಗಳಾಗಿತ್ತು. ಅವರನ್ನು ಮೊದಲು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕೆಎಂಸಿಆರ್ಐ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 6ರಂದು ಮುಂಜಾನೆ 1.55ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.
ಮೃತರ ಪತ್ನಿ ರೇಣವ್ವ ಕೆಳಗಿನಮನಿ ನೀಡಿದ ದೂರಿನ ಮೇರೆಗೆ, ಆರೋಪಿತರ ನಿರ್ಲಕ್ಷ್ಯವೇ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.