Monday, September 7, 2026
Join WhatsApp Group
HomeCrimeಡಬಲ್ ಹಣದ ಲಾಭದಾಸೆ; ಸಿದ್ದಾಪುರದ ಸರ್ಕಾರಿ ನೌಕರನಿಗೆ ₹20.72 ಲಕ್ಷ ವಂಚನೆ

ಡಬಲ್ ಹಣದ ಲಾಭದಾಸೆ; ಸಿದ್ದಾಪುರದ ಸರ್ಕಾರಿ ನೌಕರನಿಗೆ ₹20.72 ಲಕ್ಷ ವಂಚನೆ

ಸಿದ್ದಾಪುರ: ಸೈಬರ್‌ ಅಪರಾಧಗಳ ಬಗ್ಗೆ ಪೊಲೀಸ್ ಇಲಾಖೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ, ಆನ್‌ಲೈನ್‌ನಲ್ಲಿ ಹಣವನ್ನು ದುಪ್ಪಟ್ಟಾಗಿಸುವ ಆಸೆ ಮಾತ್ರ ಕಡಿಮೆಯಾಗುತ್ತಿಲ್ಲ. ಇದೇ ಆಸೆಯನ್ನು ಬಂಡವಾಳ ಮಾಡಿಕೊಂಡ ಅಪರಿಚಿತರು ಸಿದ್ದಾಪುರದ ಸರ್ಕಾರಿ ನೌಕರರೊಬ್ಬರಿಗೆ ಬರೋಬ್ಬರಿ ₹20.72 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಿದ್ದಾಪುರ ಶಹರದ 41 ವರ್ಷದ ಸರ್ಕಾರಿ ನೌಕರ ಮಂಜಪ್ಪ ಟಿ. ಅವರು ನೀಡಿದ ದೂರಿನ ಆಧಾರದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರ ಹೆಸರು ಹಾಗೂ ವಿಳಾಸ ಸದ್ಯಕ್ಕೆ ಪತ್ತೆಯಾಗಿಲ್ಲ.

ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟಾಗುತ್ತದೆ ಎಂದು ಆರೋಪಿತರು ಮಂಜಪ್ಪ ಅವರನ್ನು ನಂಬಿಸಿದ್ದಾರೆ. ಬಳಿಕ ಅವರನ್ನು ಆನ್‌ಲೈನ್ ಟ್ರೇಡಿಂಗ್‌ ಪ್ಲಾಟ್‌ಫಾರ್ಮ್‌ಗೆ ಸೇರಿಸಿ, ವಿವಿಧ ದಿನಾಂಕಗಳಲ್ಲಿ ಫೋನ್‌ಪೇ ಹಾಗೂ ಯುಪಿಐ ಮೂಲಕ ಹಣ ವರ್ಗಾಯಿಸಿಕೊಂಡಿದ್ದಾರೆ.

ಹೀಗೆ ವಿವಿಧ ವಹಿವಾಟುಗಳ ಮೂಲಕ ಒಟ್ಟು ₹20,72,580 ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ. ಆದರೆ ಹಣದ ಅಗತ್ಯ ಎದುರಾದಾಗ ಮಂಜಪ್ಪ ಅವರು ತಮ್ಮ ಹೂಡಿಕೆಯ ಹಣವನ್ನು ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಹಣ ಬರಲಿಲ್ಲ. ಆಗ ತಾವು ಬಳಸುತ್ತಿದ್ದ ಟ್ರೇಡಿಂಗ್‌ ಪ್ಲಾಟ್‌ಫಾರ್ಮ್‌ ಮೋಸದ ಜಾಲತಾಣವಾಗಿರಬಹುದು ಎಂಬ ಅನುಮಾನ ಅವರಿಗೆ ಬಂದಿದೆ.

ಈ ಸಂಬಂಧ ಅವರು ಸೈಬರ್ ಕ್ರೈಂ ಪೋರ್ಟಲ್ ಹಾಗೂ 1930 ಸಹಾಯವಾಣಿಗೆ ದೂರು ಸಲ್ಲಿಸಿದ್ದರು. 2025ರ ಅಕ್ಟೋಬರ್ 1, ನವೆಂಬರ್ 6 ಹಾಗೂ 2026ರ ಜೂನ್ 11ರಂದು ದೂರುಗಳ ಸ್ವೀಕೃತಿ ಸಂಖ್ಯೆಗಳನ್ನೂ ಪಡೆದಿದ್ದರು. ಸೈಬರ್ ಕ್ರೈಂ ಸಿಬ್ಬಂದಿ ಹಣ ವಾಪಸ್ ಕೊಡಿಸುವ ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸಿ ಅವರು ಪೊಲೀಸ್ ಠಾಣೆಗೆ ದೂರು ನೀಡದೆ ಇದ್ದರು.

ಬಳಿಕ ಪೊಲೀಸ್ ಠಾಣೆಗೆ ದೂರು ನೀಡುವುದು ಅಗತ್ಯ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ.

ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಕಡಿಮೆ ಅವಧಿಯಲ್ಲಿ ಹಣ ದುಪ್ಪಟ್ಟಾಗುತ್ತದೆ, ಖಚಿತ ಲಾಭ ಸಿಗುತ್ತದೆ ಎಂಬ ಭರವಸೆ ನೀಡುವ ಅಪರಿಚಿತ ವ್ಯಕ್ತಿಗಳು ಅಥವಾ ಆ್ಯಪ್‌ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಹೂಡಿಕೆ ಮಾಡುವ ಮುನ್ನ ಸಂಸ್ಥೆಯ ವಿಶ್ವಾಸಾರ್ಹತೆ ಪರಿಶೀಲಿಸದೆ ಹಣ ವರ್ಗಾಯಿಸಿದರೆ, ಹಣ ಕಳೆದುಕೊಂಡ ಬಳಿಕ ವಾಪಸ್ ಪಡೆಯುವುದು ಮತ್ತೊಂದು ದೊಡ್ಡ ಸವಾಲಾಗಬಹುದು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share