Monday, September 7, 2026
Join WhatsApp Group
HomeCrimeಒಳಾಂಗಣ ವಿನ್ಯಾಸಕಾರನ ಮೊಬೈಲ್ ಹ್ಯಾಕ್; ಕಳೆದಿದ್ದು 3.69 ಲಕ್ಷ ರೂ!

ಒಳಾಂಗಣ ವಿನ್ಯಾಸಕಾರನ ಮೊಬೈಲ್ ಹ್ಯಾಕ್; ಕಳೆದಿದ್ದು 3.69 ಲಕ್ಷ ರೂ!

ಹೊನ್ನಾವರ: ಮೊಬೈಲ್‌ ಫೋನ್‌ ಹ್ಯಾಕ್ ಮಾಡಿ ಅಥವಾ ಯಾವುದೋ ಆನ್‌ಲೈನ್‌ ಮಾರ್ಗದ ಮೂಲಕ ಬ್ಯಾಂಕ್‌ ಖಾತೆಗೆ ಕನ್ನ ಹಾಕಿದ ಸೈಬರ್‌ ಕಳ್ಳರು, ಹೊನ್ನಾವರದ ಒಳಾಂಗಣ ವಿನ್ಯಾಸಗಾರರೊಬ್ಬರ ಖಾತೆಯಿಂದ ಹಂತ ಹಂತವಾಗಿ ₹3.69 ಲಕ್ಷ ಹಣವನ್ನು ಎಗರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದ ಕೆಕ್ಕಾರ ನಿವಾಸಿ, 38 ವರ್ಷದ ಒಳಾಂಗಣ ವಿನ್ಯಾಸಗಾರ ಆನಂದ ಗಣಪತಿ ಭಟ್ ಅವರು ನೀಡಿದ ದೂರಿನ ಆಧಾರದಲ್ಲಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರ ಗುರುತು ಹಾಗೂ ವಿಳಾಸ ಸದ್ಯಕ್ಕೆ ಪತ್ತೆಯಾಗಿಲ್ಲ.

ಆರೋಪಿತರು ಆನಂದ ಅವರ ಮೊಬೈಲ್‌ ಫೋನ್‌ ಅನ್ನು ಹ್ಯಾಕ್ ಮಾಡಿರಬಹುದು ಅಥವಾ ಯಾವುದೋ ಆನ್‌ಲೈನ್‌ ಮಾರ್ಗದ ಮೂಲಕ ಅವರ ಬ್ಯಾಂಕ್‌ ಖಾತೆಯ ಮಾಹಿತಿಯನ್ನು ಪಡೆದುಕೊಂಡಿರಬಹುದು ಎನ್ನಲಾಗಿದೆ. ಬಳಿಕ ಹೊನ್ನಾವರದಲ್ಲಿರುವ ಕೆನರಾ ಬ್ಯಾಂಕ್‌ನ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹3,69,667 ಹಣವನ್ನು ಆನಂದ ಅವರ ಗಮನಕ್ಕೆ ಬಾರದಂತೆ ಆರೋಪಿತರ ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಮ್ಮ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದ ಬಳಿಕ ಆನಂದ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣ ವರ್ಗಾವಣೆಯಾದ ಖಾತೆಗಳು ಹಾಗೂ ಸೈಬರ್‌ ವಂಚಕರ ಪತ್ತೆಗೆ ತನಿಖೆ ಮುಂದುವರಿದಿದೆ.

ಮೊಬೈಲ್‌ ಹ್ಯಾಕ್‌, ಫಿಶಿಂಗ್‌ ಲಿಂಕ್‌, ನಕಲಿ ಆ್ಯಪ್‌ ಅಥವಾ ವಂಚಕರಿಂದ ಕದ್ದ ಬ್ಯಾಂಕ್‌ ಮಾಹಿತಿಯ ಮೂಲಕ ಖಾತೆಯಿಂದ ಹಣ ಎಗರಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮೊಬೈಲ್‌ ಹಾಗೂ ಬ್ಯಾಂಕಿಂಗ್‌ ಮಾಹಿತಿಯ ಸುರಕ್ಷತೆಯ ಬಗ್ಗೆ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share