ಯಲ್ಲಾಪುರ: ಲೋಕಕಲ್ಯಾಣ ಹಾಗೂ ಅಡಿಕೆ ಬೆಳೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗ ಪರಿಹಾರಕ್ಕಾಗಿ ಚಂದಗುಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 21 ಸಾವಿರ ಅಥರ್ವಶೀರ್ಷ ಪಾರಾಯಣ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ವರ್ಷದ ಚಾತುರ್ಮಾಸವನ್ನು ತುರುವೇಕೆರೆಯ (ಶಿಗೇಹಳ್ಳಿ) ಸ್ವಾಮಿ ಪ್ರಣವಾನಂದ ಶ್ರೀಗಳು ದೇವಸ್ಥಾನದಲ್ಲಿ ಆಚರಿಸುತ್ತಿದ್ದಾರೆ. ಶ್ರೀಗಳ ಆಶಯದಂತೆ ಭಕ್ತರ ಸಹಕಾರದೊಂದಿಗೆ ಈ ಮಹತ್ಕಾರ್ಯವನ್ನು ಕೈಗೊಳ್ಳಲಾಗಿದೆ.
ಆ.1ರಿಂದ ಪ್ರತಿ ಶನಿವಾರ ಬೆಳಗ್ಗೆ ಹಾಗೂ ಮಧ್ಯಾಹ್ನದ ನಂತರ ದೇವಸ್ಥಾನದಲ್ಲಿ ಅಥರ್ವಶೀರ್ಷ ಪಾರಾಯಣ ನಡೆಯುತ್ತಿದೆ. ಸೆ.29ರಂದು ಅಂಗಾರಕ ಸಂಕಷ್ಟಿಯಂದು ಅಥರ್ವಶೀರ್ಷ ಹವನ ನಡೆಸಲು ನಿರ್ಧರಿಸಲಾಗಿದೆ.
ಭಕ್ತರು ಪ್ರತಿ ಶನಿವಾರ ದೇವಸ್ಥಾನಕ್ಕೆ ಆಗಮಿಸಿ ಪಾರಾಯಣದಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಮನೆಯಲ್ಲಿ ಕೂಡ ಪಾರಾಯಣ ಮಾಡುವ ಅವಕಾಶವಿದ್ದು, ವಾರಕ್ಕೆ ಒಂದು ದಿನ ತಾವು ಪಠಿಸುವ ಸಂಖ್ಯೆಯನ್ನು ದೇವಸ್ಥಾನದ ಕಾರ್ಯಾಲಯಕ್ಕೆ ತಿಳಿಸಿ ಈ ಮಹತ್ಕಾರ್ಯದಲ್ಲಿ ಭಾಗಿಯಾಗಬಹುದು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ದೇವಸ್ಥಾನದ ಕಾರ್ಯಾಲಯ: 08419 200572, ವಾಟ್ಸ್ಆ್ಯಪ್: 9482912495, 8867442894 ಸಂಪರ್ಕಿಸಬಹುದು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.