ಭಟ್ಕಳ: ಬೈಲೂರು ಗ್ರಾಮದಲ್ಲಿ ಅಪ್ರಾಪ್ತ ಬಾಲಕರಿಂದ ನಡೆದ ಕಲ್ಲೆಸೆತ ಘಟನೆಗೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸರು ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದ್ದು, ಅಪ್ರಾಪ್ತರಿಗೆ ಮತ್ತಿನ ಪದಾರ್ಥಗಳನ್ನು ಪೂರೈಸಿದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಂಧಿತ ವ್ಯಕ್ತಿ ಭಟ್ಕಳದ ಕರಗದ್ದೆ 2ನೇ ಕ್ರಾಸ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಬೈಲೂರಿನಲ್ಲಿ ಅಪ್ರಾಪ್ತ ಬಾಲಕರ ಗುಂಪೊಂದು ಹಿಂದೂ ಮನೆಗಳ ಮೇಲೆ ಕಲ್ಲೆಸೆದ ಘಟನೆ ನಡೆದಿದ್ದು, ಅದರ ತನಿಖೆ ವೇಳೆ ಈ ಆರೋಪ ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ಅಪ್ರಾಪ್ತರಿಗೆ ಮ*ತ್ತಿನ ಪದಾರ್ಥಗಳನ್ನು ನೀಡಿದ್ದು, ಅದರಿಂದ ಅವರು ಘಟನೆಯಲ್ಲಿ ಭಾಗಿಯಾಗಲು ಪ್ರೇರಿತರಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ವಿಶ್ವಾಸಾರ್ಹ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಾಚರಣೆಯ ವೇಳೆ ಆರೋಪಿತನಿಂದ ಒಂದು ಇ-ಸಿಗರೇಟ್ ಪ್ಯಾಕೆಟ್ ಹಾಗೂ ಒಂಬತ್ತು ರಿಫಿಲ್ ಕಾರ್ಟ್ರಿಡ್ಜ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.